Chapter 1
- ಸಂಜಯನು ಹೇಳಿದನು – ಹೀಗೆ ಕರುಣೆಯಿಂದ ವ್ಯಾಪ್ತನಾದ ಕಂಬನಿತುಂಬಿ ವ್ಯಾಕುಲ ಕಣ್ಣುಗಳುಳ್ಳವನಾದ, ಶೋಕಿಸುತ್ತಿರುವ ಅರ್ಜುನನಲ್ಲಿ ಭಗವಾನ್ ಮಧುಸೂದನನು ಹೀಗೆ ಹೇಳಿದನು. ॥1॥
Chapter 16
- ಶ್ರೀಭಗವಂತನು ಹೇಳಿದನು – ಭಯದ ಸರ್ವಥಾ ಅಭಾವ, ಅಂತಃಕರಣದ ಪೂರ್ಣ ನಿರ್ಮಲತೆ, ತತ್ತ್ವಜ್ಞಾನಕ್ಕಾಗಿ ಧ್ಯಾನಯೋಗದಲ್ಲಿ ನಿರಂತರ ದೃಢಸ್ಥಿತಿ ಮತ್ತು ಸಾತ್ವಿಕದಾನ, ಇಂದ್ರಿಯಗಳ ದಮನ, ಭಗವಂತನ, ದೇವತೆಗಳ, ಗುರುಜನರ ಪೂಜೆ, ಅಗ್ನಿಹೋತ್ರಾದಿ ಉತ್ತಮ ಕರ್ಮಗಳ ಆಚರಣೆ, ವೇದ ಶಾಸ್ತ್ರಗಳ ಪಠಣ-ಪಾಠಣ, ಭಗವಂತನ ನಾಮ ಮತ್ತು ಗುಣಗಳ ಕೀರ್ತನೆ, ಸ್ವಧರ್ಮಪಾಲನೆಗಾಗಿ ಕಷ್ಟವನ್ನು ಸಹಿಸುವುದು ಹಾಗೂ ಶರೀರ ಇಂದ್ರಿಯಗಳಸಹಿತ ಅಂತಃಕರಣದ ಸರಳತೆ – (16.1)
- ಮನಸ್ಸು, ಮಾತು, ಶರೀರದಿಂದ ಯಾರಿಗೂ ಯಾವ ರೀತಿಯಿಂದಲೂ ಕಷ್ಟಕೊಡದಿರುವುದು, ಯಥಾರ್ಥ ಹಾಗೂ ಪ್ರಿಯವಾಗಿ ಮಾತನಾಡುವುದು, ತನಗೆ ಅಪಕಾರ ಮಾಡಿದವರ ಮೇಲೆ ಸಿಟ್ಟಾಗದಿರುವುದು, ಕರ್ಮಗಳಲ್ಲಿ ಕರ್ತೃತ್ವದ ಅಭಿಮಾನ ತ್ಯಾಗ, ಅಂತಃಕರಣದಲ್ಲಿ ಚಂಚಲತೆ ಇಲ್ಲದಿರುವುದು, ಯಾರನ್ನೂ ನಿಂದಿಸದಿರುವುದು, ಎಲ್ಲ ಪ್ರಾಣಿಗಳಲ್ಲಿ ಕಾರಣರಹಿತ ದಯೆ, ಇಂದ್ರಿಯಗಳು ವಿಷಯಗಳೊಡನೆ ಸಂಯೋಗವಾದರೂ ಅದರಲ್ಲಿ ಆಸಕ್ತರಾಗದಿರುವುದು, ಕೋಮಲತೆ, ಲೋಕ ಮತ್ತು ಶಾಸ್ತ್ರಕ್ಕೆ ವಿರುದ್ಧವಾದ ಆಚರಣೆಯಲ್ಲಿ ಲಜ್ಜೆ ಹಾಗೂ ವ್ಯರ್ಥವಾದ ಚೇಷ್ಟೆಯ ಅಭಾವ – (16.2)
- ತೇಜಸ್ಸು, ಕ್ಷಮೆ, ಧೈರ್ಯ, ಬಾಹ್ಯಶುದ್ಧಿ, ಯಾರಲ್ಲಿಯೂ ಶತ್ರುತ್ವ ಇಲ್ಲದಿರುವುದು ಮತ್ತು ತನ್ನಲ್ಲಿ ಹಿರಿತನದ ಅಭಿಮಾನ ಇಲ್ಲದಿರುವಿಕೆ, ಎಲೈ ಅರ್ಜುನ! ಇವೆಲ್ಲ ದೈವೀ ಸಂಪತ್ತನ್ನು ಪಡೆದು ಜನಿಸಿರುವ ಪುರುಷರ ಲಕ್ಷಣಗಳಾಗಿವೆ. (16.3)
- ಎಲೈ ಅರ್ಜುನ! ದಂಭ, ಅಹಂಕಾರ, ಅಭಿಮಾನ, ಕ್ರೋಧ, ಕಠೋರತೆ ಮತ್ತು ಅಜ್ಞಾನ ಇವೆಲ್ಲ ಆಸುರೀ ಸಂಪತ್ತನ್ನು ಪಡೆದು ಹುಟ್ಟಿದ ಪುರುಷರ ಲಕ್ಷಣವಾಗಿದೆ. (16.4)
- ದೈವೀ ಸಂಪತ್ತು ಮುಕ್ತಿಗಾಗಿ ಮತ್ತು ಆಸುರೀ ಸಂಪತ್ತು ಬಂಧನಕಾರಕವೆಂದು ತಿಳಿಯಲಾಗಿದೆ. ಆದ್ದರಿಂದ ಎಲೈ ಅರ್ಜುನ! ನೀನು ಶೋಕಪಡಬೇಡ, ಏಕೆಂದರೆ ನೀನು ದೈವೀ ಸಂಪತ್ತನ್ನು ಪಡೆದು ಜನಿಸಿರುವೆ. (16.5)
- ಎಲೈ ಅರ್ಜುನ! ಈ ಜಗತ್ತಿನಲ್ಲಿ ಮನುಷ್ಯ ಸಮುದಾಯವು ಎರಡೇ ಪ್ರಕಾರಗಳಿಂದ ಇದೆ. ಒಂದು ದೈವೀ ಪ್ರಕೃತಿಯವರು, ಇನ್ನೊಂದು ಆಸುರೀ ಪ್ರಕೃತಿಯವರು. ಅವುಗಳಲ್ಲಿ ದೈವೀ ಪ್ರಕೃತಿಯನ್ನು ವಿಸ್ತಾರವಾಗಿ ಹೇಳಲಾಯಿತು. ಇನ್ನು ನೀನು ಆಸುರೀ ಪ್ರಕೃತಿಯ ಮನುಷ್ಯ ಸಮುದಾಯದ ಕುರಿತೂ ವಿಸ್ತಾರವಾಗಿ ನನ್ನಿಂದ ಕೇಳು. (16.6)
- ಆಸುರೀ ಸ್ವಭಾವದ ಜನರು ಪ್ರವೃತ್ತಿ ಮತ್ತು ನಿವೃತ್ತಿ ಎರಡನ್ನೂ ತಿಳಿಯರು. ಅದಕ್ಕಾಗಿ ಅವರಲ್ಲಿ ಅಂತರ್ಬಾಹ್ಯ ಶುದ್ಧಿಯಾಗಲೀ, ಉತ್ತಮ ಆಚರಣೆಯಾಗಲೀ, ಸತ್ಯಭಾಷಣವಾಗಲೀ ಇರುವುದಿಲ್ಲ. (16.7)
- ಆ ಆಸುರೀ ಸ್ವಭಾವದ ಜನರು – ಈ ಜಗತ್ತು ಆಶ್ರಯರಹಿತ, ಸರ್ವಥಾ ಅಸತ್ಯ ಮತ್ತು ದೇವರಿಲ್ಲದೆಯೇ ತನ್ನಿಂದ ತಾನೇ ಕೇವಲ ಸ್ತ್ರೀ-ಪುರುಷರ ಸಂಯೋಗದಿಂದ ಸೃಷ್ಟಿಯಾಗಿದೆ. ಆದ್ದರಿಂದ ಕಾಮವೇ ಇದರ ಕಾರಣವಾಗಿದೆ. ಇದಲ್ಲದೆ ಬೇರೇನಿದೆ? ಎಂದು ಹೇಳುತ್ತಾರೆ. (16.8)
- ಇಂತಹ ಮಿಥ್ಯಾಜ್ಞಾನವನ್ನು ಅವಲಂಬಿಸಿದ ಮನುಷ್ಯರ ಸ್ವಭಾವವು ನಾಶವಾಗಿ ಹೋಗಿದೆ. ಅವರ ಬುದ್ಧಿ ಮಂದವಾಗಿದೆ. ಎಲ್ಲರಿಗೂ ಅಪಕಾರ ಮಾಡುವ ಕ್ರೂರ ಕರ್ಮಿಗಳಾದ ಇವರು ಕೇವಲ ಜಗತ್ತಿನ ನಾಶಕ್ಕಾಗಿಯೇ ಸಮರ್ಥರಾಗಿರುತ್ತಾರೆ. (16.9)
- ದಂಭ, ಮಾನ, ಮದದಿಂದ ಕೂಡಿದ ಮನುಷ್ಯರು ಯಾವ ರೀತಿಯಿಂದಲೂ ಪೂರ್ಣವಾಗದ ಕಾಮನೆಗಳ ಆಶ್ರಯಪಡೆದು, ಅಜ್ಞಾನದಿಂದ ಮಿಥ್ಯಾ ಸಿದ್ಧಾಂತಗಳನ್ನು ಗ್ರಹಿಸಿಕೊಂಡು, ಭ್ರಷ್ಟ ಆಚರಣೆಯನ್ನು ತಮ್ಮದಾಗಿಸಿಕೊಂಡು ಜಗತ್ತಿನಲ್ಲಿ ವ್ಯವಹರಿಸುತ್ತಾರೆ. (16.10)
- ಹಾಗೆಯೇ ಅವರು ಆಮರಣಾಂತ ಅಸಂಖ್ಯ ಚಿಂತೆಗಳನ್ನು ಆಶ್ರಯಿಸಿ, ವಿಷಯಭೋಗಗಳನ್ನು ಭೋಗಿಸಲು ತತ್ಪರರಾಗಿ ‘ಸುಖವೆಂದರೆ ಇಷ್ಟೇ’ ಎಂದು ತಿಳಿದವರಾಗಿರುತ್ತಾರೆ. (16.11)
- ನೂರಾರು ಆಸೆಗಳ ಪಾಶಗಳಿಂದ ಬಂಧಿತರಾದ ಆ ಮನುಷ್ಯರು ಕಾಮ-ಕ್ರೋಧ ಪರಾಯಣರಾಗಿ ವಿಷಯ ಭೋಗಗಳಿಗಾಗಿ, ಅನ್ಯಾಯಪೂರ್ವಕ ಧನಾದಿ ಪದಾರ್ಥಗಳನ್ನು ಸಂಗ್ರಹಿಸುವ ಪ್ರಯತ್ನ ಮಾಡುತ್ತಾ ಇರುತ್ತಾರೆ. (16.12)
- ನಾನು ಇಂದು ಇದನ್ನು ಗಳಿಸಿದೆ ಹಾಗೂ ಇನ್ನು ಇಂತಹ ಮನೋರಥವನ್ನು ಪೂರ್ಣಗೊಳಿಸುವೆನು. ನನ್ನ ಬಳಿ ಇಷ್ಟು ಧನವಿದೆ ಮತ್ತು ಇನ್ನೂ ಧನಸಂಗ್ರಹವಾಗುವುದು ಎಂದು ಅವರು ಯೋಚಿಸುತ್ತಾರೆ. (16.13)
- ಈ ಶತ್ರುವನ್ನು ನಾನು ಕೊಂದೆ ಮತ್ತು ಆ ಇತರ ಶತ್ರುಗಳನ್ನೂ ನಾನು ಕೊಲ್ಲುವೆನು. ನಾನೇ ಈಶ್ವರನಾಗಿದ್ದೇನೆ, ಐಶ್ವರ್ಯವನ್ನು ಭೋಗಿಸುವವನಾಗಿದ್ದೇನೆ. ನಾನು ಎಲ್ಲ ಸಿದ್ಧಿಗಳಿಂದ ಕೂಡಿರುವೆನು ಮತ್ತು ಬಲಶಾಲಿಯೂ, ಸುಖಿಯೂ ಆಗಿದ್ದೇನೆ. (16.14)
- ನಾನು ದೊಡ್ಡ ಶ್ರೀಮಂತ ಮತ್ತು ದೊಡ್ಡ ಮನೆತನದಲ್ಲಿ ಹುಟ್ಟಿದವನು. ನನಗೆ ಸಮಾನರು ಬೇರೆ ಯಾರಿದ್ದಾರೆ? ನಾನು ಯಜ್ಞವನ್ನು ಮಾಡುವೆನು, ದಾನ ಕೊಡುವೆನು, ಆಮೋದ-ಪ್ರಮೋದ ಮಾಡುವೆನು. ಹೀಗೆ ಅಜ್ಞಾನದಿಂದ ಮೋಹಿತರಾಗಿ, ಅನೇಕ ಪ್ರಕಾರದಿಂದ ಭ್ರಮಿತ ಚಿತ್ತವುಳ್ಳವರು, ಮೋಹಜಾಲದಲ್ಲಿ ಸಿಕ್ಕಿಹಾಕಿಕೊಂಡು, ವಿಷಯ ಭೋಗಗಳಲ್ಲಿ ಅತ್ಯಂತ ಆಸಕ್ತರಾದ ಆಸುರೀ ಜನರು ಮಹಾ ಅಪವಿತ್ರ ನರಕದಲ್ಲಿ ಬೀಳುತ್ತಾರೆ. (16.15-16)
- ತಮ್ಮನ್ನೇ ಶ್ರೇಷ್ಠರೆಂದು ತಿಳಿದ ಅಹಂಕಾರೀ ಆ ಜನರು ಧನ ಮತ್ತು ಮಾನದ ಮದದಿಂದ ಉನ್ಮತ್ತರಾಗಿ, ಕೇವಲ ಹೆಸರಿಗಷ್ಟೇ ಯಜ್ಞಗಳ ಮೂಲಕ ದಂಭ (ಪಾಖಂಡತೆ)ದಿಂದ ಶಾಸ್ತ್ರವಿಧಿರಹಿತ ಯಜ್ಞ ಮಾಡುತ್ತಾರೆ. (16.17)
- ಅವರು ಅಹಂಕಾರ, ಬಲ, ದರ್ಪ, ಕಾಮನೆ ಮತ್ತು ಕ್ರೋಧಾದಿಗಳ ವಶರಾಗಿರುತ್ತಾರೆ. ಹಾಗೆಯೇ ಇತರರನ್ನು ನಿಂದಿಸುವ ಪುರುಷರು ತಮ್ಮ ಮತ್ತು ಬೇರೆಯವರ ಶರೀರದಲ್ಲಿ ಸ್ಥಿತನಾಗಿರುವ ಅಂತರ್ಯಾಮಿಯಾದ ನನ್ನನ್ನು ದ್ವೇಷಿಸುತ್ತಾರೆ. (16.18)
- ಆ ದ್ವೇಷಿಸುವ ಪಾಪೀ, ಕ್ರೂರಕರ್ಮಿಗಳೂ ಆದ ನರಾಧಮರನ್ನು ನಾನು ಸಂಸಾರದಲ್ಲಿ ಪದೇ-ಪದೇ ಆಸುರೀ ಯೋನಿಗಳಲ್ಲಿ ಹಾಕುತ್ತಾ ಇರುತ್ತೇನೆ. (16.19)
- ಎಲೈ ಅರ್ಜುನ! ಆ ಮೂಢರು ನನ್ನನ್ನು ಪಡೆಯದೆ ಜನ್ಮ-ಜನ್ಮಗಳಲ್ಲಿ ಆಸುರೀ ಯೋನಿಯನ್ನೇ ಪಡೆಯುತ್ತಾರೆ. ಬಳಿಕ ಅದಕ್ಕಿಂತಲೂ ಅತಿ ನೀಚ ಗತಿಯನ್ನೇ ಹೊಂದುತ್ತಾರೆ. ಅಂದರೆ ಘೋರವಾದ ನರಕದಲ್ಲಿ ಬೀಳುತ್ತಾರೆ. (16.20)
- ಕಾಮ, ಕ್ರೋಧ ಮತ್ತು ಲೋಭ ಇವು ಮೂರು ರೀತಿಯ ನರಕದ ಬಾಗಿಲುಗಳು. ಆತ್ಮನ ನಾಶಮಾಡುವ ಅರ್ಥಾತ್ ಅವನನ್ನು ಅಧೋಗತಿಗೆ ಕೊಂಡೊಯ್ಯುವಂತಹವುಗಳು. ಆದ್ದರಿಂದ ಆ ಮೂರನ್ನೂ ತ್ಯಜಿಸಬಿಡಬೇಕು. (16.21)
- ಎಲೈ ಅರ್ಜುನ! ಈ ಮೂರು ನರಕದ ದ್ವಾರಗಳಿಂದ ಮುಕ್ತನಾದ ಪುರುಷನು ತನ್ನ ಶ್ರೇಯಸ್ಸಿಗಾಗಿ ಆಚರಣೆ ಮಾಡುತ್ತಾನೆ. ಅದರಿಂದ ಅವನು ಪರಮಗತಿಯನ್ನು ಗಳಿಸುತ್ತಾನೆ. ಅರ್ಥಾತ್ ನನ್ನನ್ನೇ ಹೊಂದುತ್ತಾನೆ. (16.22)
- ಶಾಸ್ತ್ರವಿಧಿಯನ್ನು ಬಿಟ್ಟು ತನ್ನ ಮನಸ್ಸಿಗೆ ಬಂದಂತೆ ಆಚರಣೆ ಮಾಡುವವನು ಸಿದ್ಧಿಯನ್ನು ಪಡೆಯುವುದಿಲ್ಲ, ಪರಮಗತಿಯನ್ನೂ ಪಡೆಯುವುದಿಲ್ಲ ಹಾಗೂ ಸುಖವನ್ನೂ ಹೊಂದುವುದಿಲ್ಲ. (16.23)
- ಆದ್ದರಿಂದ ನಿನಗೆ ಕರ್ತವ್ಯ ಮತ್ತು ಅಕರ್ತವ್ಯದ ವ್ಯವಸ್ಥೆಯಲ್ಲಿ ಶಾಸ್ತ್ರವೇ ಪ್ರಮಾಣವಾಗಿದೆ. ಹೀಗೆ ತಿಳಿದು ನೀನು ಶಾಸ್ತ್ರವಿಧಿಯಿಂದ ನಿಯತ ಕರ್ಮವನ್ನೇ ಮಾಡಲು ಯೋಗ್ಯನಾಗಿರುವೆ. (16.24)
Chapter 17
- ಅರ್ಜುನನು ಹೇಳಿದನು – ಹೇ ಕೃಷ್ಣಾ! ಶಾಸ್ತ್ರವಿಧಿಯನ್ನು ಬಿಟ್ಟು ಶ್ರದ್ಧೆಯಿಂದ ಕೂಡಿದವರಾಗಿ ದೇವತೆಗಳ ಪೂಜೆ ಮಾಡುವ ಮನುಷ್ಯರ ಸ್ಥಿತಿಯು ಯಾವುದು? ಸಾತ್ವಿಕವೋ, ರಾಜಸವೋ ಅಥವಾ ತಾಮಸವೋ? (17.1)
- ಶ್ರೀಭಗವಂತನು ಹೇಳಿದನು – ಮನುಷ್ಯರ ಶಾಸ್ತ್ರೀಯ ಸಂಸ್ಕಾರರಹಿತವಾದ, ಕೇವಲ ಸ್ವಭಾವದಿಂದ ಉಂಟಾದ ಶ್ರದ್ಧೆಯು ಸಾತ್ತ್ವಿಕ, ರಾಜಸ ಹಾಗೂ ತಾಮಸ ಹೀಗೆ ಮೂರು ವಿಧದ್ದೇ ಆಗಿದೆ. ಅದನ್ನು ನೀನು ನನ್ನಿಂದ ಕೇಳು. (17.2)
- ಎಲೈ ಅರ್ಜುನ! ಎಲ್ಲ ಮನುಷ್ಯರ ಶ್ರದ್ಧೆಯು ಅವರವರ ಅಂತಃಕರಣಕ್ಕನು ರೂಪವಾಗಿ ಇರುತ್ತದೆ. ಈ ಪುರುಷನು ಶ್ರದ್ಧಾಮಯನಾಗಿದ್ದಾನೆ. ಆದ್ದರಿಂದ ಯಾವ ಮನುಷ್ಯನು ಎಂತಹ ಶ್ರದ್ಧೆಯುಳ್ಳವನೋ ಅವನು ಅದೇ ಆಗಿದ್ದಾನೆ. ಅರ್ಥಾತ್ ಆ ಶ್ರದ್ಧೆಗನುಸಾರವೇ ಅವನ ಸ್ವರೂಪ ಇರುತ್ತದೆ. (17.3)
- ಸಾತ್ತ್ವಿಕ ಜನರು ದೇವತೆಗಳನ್ನು ಪೂಜಿಸುತ್ತಾರೆ. ರಾಜಸ ಜನರು ಯಕ್ಷ-ರಾಕ್ಷಸರನ್ನು ಹಾಗೆಯೇ ಇತರ ತಾಮಸ ಜನರು ಪ್ರೇತ ಮತ್ತು ಭೂತಗಣಗಳನ್ನು ಪೂಜಿಸುತ್ತಾರೆ. (17.4)
- ಶಾಸ್ತ್ರವಿಧಿಯನ್ನು ಬಿಟ್ಟು ಕೇವಲ ಮನೋಕಲ್ಪಿತವಾದ ಘೋರ ತಪಸ್ಸನ್ನು ಆಚರಿಸುವ ಮನುಷ್ಯರು ದಂಭ, ಅಹಂಕಾರ, ಕಾಮನೆ, ಆಸಕ್ತಿಗಳಿಂದ ಕೂಡಿದವರಾಗಿ ಬಲದ ಅಭಿಮಾನದಿಂದಲೂ ಕೂಡಿಕೊಂಡಿದ್ದು – (17.5)
- ಶರೀರರೂಪದಿಂದ ಇರುವ ಪ್ರಾಣಿ ಸಮುದಾಯವನ್ನು ಮತ್ತು ಅಂತಃಕರಣದಲ್ಲಿ ಇರುವ ಪರಮಾತ್ಮನಾದ ನನ್ನನ್ನು ಕೃಶಗೊಳಿಸುವ ಅಜ್ಞಾನೀ ಜನರನ್ನು ಆಸುರೀ ಸ್ವಭಾವದವರೆಂದು ನೀನು ತಿಳಿ. (17.6)
- ಭೋಜನವೂ ಎಲ್ಲರಿಗೆ ತಮ್ಮ-ತಮ್ಮ ಪ್ರಕೃತಿಗೆ ಅನುಗುಣವಾಗಿ ಮೂರು ವಿಧವಾಗಿ ಪ್ರಿಯವಾಗಿರುತ್ತದೆ. ಹಾಗೆಯೇ ಯಜ್ಞ, ತಪಸ್ಸು ಮತ್ತು ದಾನವೂ ಕೂಡ ಮೂರು-ಮೂರು ಪ್ರಕಾರದಿಂದಿರುತ್ತವೆ. ಅವುಗಳ ಈ ಬೇರೆ-ಬೇರೆ ಭೇದಗಳನ್ನು ನೀನು ನನ್ನಿಂದ ಕೇಳು. (17.7)
- ಆಯುಸ್ಸು, ಬುದ್ಧಿ, ಬಲ, ಆರೋಗ್ಯ, ಸುಖ ಮತ್ತು ಪ್ರೀತಿಯನ್ನು ಹೆಚ್ಚಿಸುವ, ರಸಯುಕ್ತ, ಸ್ನೇಹಯುಕ್ತ, ಸ್ನಿಗ್ಧ, ಸ್ಥಿರವಾಗಿರುವ ಹಾಗೂ ಸ್ವಭಾವದಿಂದಲೇ ಮನಸ್ಸಿಗೆ ಪ್ರಿಯವಾದ ಭೋಜನ ಪದಾರ್ಥಗಳು ಸಾತ್ತ್ವಿಕ ಪುರುಷನಿಗೆ ಪ್ರಿಯವಾಗಿರುತ್ತವೆ. (17.8)
- ಕಹಿ, ಹುಳಿ, ಹೆಚ್ಚು ಉಪ್ಪಿನಿಂದ ಕೂಡಿದ, ಹೆಚ್ಚು ಬಿಸಿ, ಹೆಚ್ಚು ಖಾರ, ಹುರಿದಿರುವ, ಉರಿಯನ್ನುಂಟುಮಾಡುವ, ದುಃಖ, ಚಿಂತೆ ಹಾಗೂ ರೋಗಗಳನ್ನುಂಟು ಮಾಡುವ ಭೋಜನ ಪದಾರ್ಥಗಳು ರಾಜಸ ಜನರಿಗೆ ಪ್ರಿಯವಾಗಿರುತ್ತವೆ. (17.9)
- ಅರ್ಧಬೆಂದಿರುವ, ರಸರಹಿತವಾದ, ದುರ್ಗಂಧಯುಕ್ತವಾದ, ಹಳಸಿದ, ಎಂಜಲಾದ ಹಾಗೂ ಅಪವಿತ್ರವೂ ಆದ ಭೋಜನವು ತಾಮಸ ಜನರಿಗೆ ಪ್ರಿಯವಾಗಿರುತ್ತದೆ. (17.10)
- ಶಾಸ್ತ್ರವಿಧಿಯು ನೇಮಿಸಿದ ಯಜ್ಞ ಮಾಡುವುದು ಕರ್ತವ್ಯವಾಗಿದೆ ಎಂದು ಮನಸ್ಸಿನಲ್ಲಿ ನಿಶ್ಚಯಿಸಿ ಫಲೇಚ್ಛೆಯನ್ನು ಬಯಸದೆ ಮಾಡುವ ಯುಜ್ಞವು ಸಾತ್ತ್ವಿಕವಾಗಿದೆ. (17.11)
- ಆದರೆ ಎಲೈ ಅರ್ಜುನ! ಕೇವಲ ತೋರಿಕೆಗಾಗಿ ಅಥವಾ ಫಲವನ್ನೇ ದೃಷ್ಟಿಯಲ್ಲಿಟ್ಟುಕೊಂಡು ಮಾಡುವ ಯಜ್ಞವನ್ನು ನೀನು ರಾಜಸವೆಂದು ತಿಳಿ. (17.12)
- ಶಾಸ್ತ್ರವಿಧಿಯನ್ನು ಬಿಟ್ಟು, ಅನ್ನದಾನವಿಲ್ಲದ, ಮಂತ್ರಗಳಿಲ್ಲದ, ದಕ್ಷಿಣೆಕೊಡದೆ, ಅಶ್ರದ್ಧೆಯಿಂದ ಮಾಡುವ ಯಜ್ಞವನ್ನು ತಾಮಸ ಯಜ್ಞವೆಂದು ಹೇಳುತ್ತಾರೆ. (17.13)
- ದೇವತೆಗಳ, ಬ್ರಾಹ್ಮಣರ, ಗುರುಗಳ ಮತ್ತು ಜ್ಞಾನಿಗಳ ಪೂಜೆ ಮಾಡುವುದು, ಪವಿತ್ರತೆ, ಸರಳತೆ, ಬ್ರಹ್ಮಚರ್ಯ, ಅಹಿಂಸೆ, ಇವು ಶಾರೀರಿಕ ತಪಸ್ಸು ಎಂದು ಹೇಳಲಾಗುತ್ತದೆ. (17.14)
- ಉದ್ವೇಗಗೊಳಿಸದ, ಪ್ರಿಯವಾದ, ಹಿತಕರವಾದ ಮತ್ತು ಯಥಾರ್ಥವಾದ ಮಾತು, ಹಾಗೆಯೇ, ವೇದಶಾಸಗಳ ಅಧ್ಯಯನ, ಪರಮೇಶ್ವರನ ನಾಮ ಜಪದ ಅಭ್ಯಾಸ – ಇವನ್ನು ವಾಣಿಯ ತಪಸ್ಸೆಂದು ಹೇಳಲಾಗುತ್ತದೆ. (17.15)
- ಮನಸ್ಸಿನ ಪ್ರಸನ್ನತೆ, ಶಾಂತಭಾವ, ಭಗವಚ್ಚಿಂತನದ ಸ್ವಭಾವ, ಮನಸ್ಸಿನ ನಿಗ್ರಹ, ಅಂತಃಕರಣದ ಭಾವಗಳ ಪೂರ್ಣ ಪವಿತ್ರತೆ ಇವು ಮನಸ್ಸಿನ ತಪಸ್ಸೆಂದು ಹೇಳಲಾಗುತ್ತದೆ. (17.16)
- ಫಲದ ಇಚ್ಛೆ ಇಲ್ಲದ ಯೋಗೀ ಪುರುಷರು ಅತ್ಯಂತ ಶ್ರದ್ಧೆಯಿಂದ ಮಾಡುವ ಹಿಂದೆ ಹೇಳಿದ ಮೂರು ಪ್ರಕಾರದ (ಕಾಯಿಕ, ವಾಚಿಕ, ಮಾನಸಿಕ) ತಪಸ್ಸನ್ನು ಸಾತ್ತ್ಪಿಕವೆಂದು ಹೇಳುತ್ತಾರೆ. (17.17)
- ಸತ್ಕಾರ, ಮಾನ ಮತ್ತು ಪೂಜೆಗಾಗಿ ಹಾಗೆಯೇ ಬೇರೆ ಯಾವುದೋ ಸ್ವಾರ್ಥಕ್ಕಾಗಿ, ಸ್ವಭಾವದಿಂದಾಗಿ ಅಥವಾ ದಂಭಾಚಾರದಿಂದ ಮಾಡುವ ತಪಸ್ಸು, ಕ್ಷಣಿಕ ಹಾಗೂ ಅನಿಶ್ಚಿತ ಫಲವುಳ್ಳ ತಪಸ್ಸನ್ನು ಇಲ್ಲಿ ರಾಜಸವೆಂದು ಹೇಳಲಾಗಿದೆ. (17.18)
- ಮೂರ್ಖತೆಯಿಂದ, ಹಟದಿಂದ, ಮನಸ್ಸು, ವಾಣಿ, ಶರೀರಕ್ಕೆ ಕಷ್ಟಕೊಟ್ಟು ಅಥವಾ ಇತರರಿಗೆ ಅನಿಷ್ಟ ಮಾಡುವುದಕ್ಕಾಗಿ ಮಾಡಲಾಗುವ ತಪಸ್ಸನ್ನು ತಾಮಸವೆಂದು ಹೇಳಲಾಗಿದೆ. (17.19)
- ‘ದಾನ ಕೊಡುವುದೇ ಕರ್ತವ್ಯವಾಗಿದೆ’ ಈ ಭಾವದಿಂದ ದೇಶ, ಕಾಲ ಮತ್ತು ಪಾತ್ರ ದೊರಕಿದಾಗ ಪ್ರತ್ಯುಪಕಾರವನ್ನು ಬಯಸದೆ ಮಾಡುವ ದಾನವನ್ನು ಸಾತ್ತ್ವಿಕವೆಂದು ಹೇಳಲಾಗಿದೆ. (17.20)
- ಆದರೆ ಕ್ಲೇಶಪೂರ್ವಕ, ಪ್ರತ್ಯುಪಕಾರದ ಇಚ್ಛೆಯಿಂದ, ಅಥವಾ ಫಲವನ್ನು ದೃಷ್ಟಿಯಲ್ಲಿಟ್ಟು ಕೊಡಲಾಗುವ ದಾನವನ್ನು ರಾಜಸ ಎಂದು ಹೇಳಲಾಗಿದೆ. (17.21)
- ಸತ್ಕಾರವಿಲ್ಲದೆ, ಅಥವಾ ತಿರಸ್ಕಾರದಿಂದ ಅಯೋಗ್ಯ ದೇಶ-ಕಾಲಗಳಲ್ಲಿ ಮತ್ತು ಕುಪಾತ್ರನಿಗೆ ಕೊಡಲಾಗುವ ದಾನವನ್ನು ತಾಮಸವೆಂದು ಹೇಳಲಾಗಿದೆ. (17.22)
- ಓಂ, ತತ್, ಸತ್ – ಹೀಗೆ ಮೂರು ಪ್ರಕಾರದ ಹೆಸರುಗಳು ಓರ್ವ ಸಚ್ಚಿದಾನಂದಘನ ಬ್ರಹ್ಮನದ್ದೇ ಆಗಿವೆ. ಅವುಗಳಿಂದಲೇ ಸೃಷ್ಟಿಯ ಆದಿಯಲ್ಲಿ ಬ್ರಾಹ್ಮಣ, ವೇದ ಹಾಗೂ ಯಜ್ಞಾದಿಗಳು ರಚಿತವಾಗಿವೆ. (17.23)
- ಆದ್ದರಿಂದ ವೇದಮಂತ್ರಗಳನ್ನು ಉಚ್ಚರಿಸುವ ಶ್ರೇಷ್ಠ ಪುರುಷರ ಶಾಸ್ತ್ರಗಳು ಹೇಳಿದ ಯಜ್ಞ, ದಾನ ಮತ್ತು ತಪೋರೂಪೀ ಕ್ರಿಯೆಗಳನ್ನು ಯಾವಾಗಲೂ ‘ಓಂ’ ಎಂಬ ಈ ಪರಮಾತ್ಮನ ನಾಮವನ್ನು ಉಚ್ಚರಿಸಿಯೇ ಪ್ರಾರಂಭವಾಗುತ್ತವೆ. (17.24)
- ‘ತತ್’ ಈ ಹೆಸರಿನಿಂದ ಸಂಬೋಧಿಸುವ ಪರಮಾತ್ಮನದ್ದೇ ಇದೆಲ್ಲವೂ ಆಗಿದೆ. ಈ ಭಾವನೆಯಿಂದ ಫಲವನ್ನು, ಬಯಸದೆ ನಾನಾ ಪ್ರಕಾರದ ಯಜ್ಞ, ತಪಸ್ಸು ಮತ್ತು ದಾನರೂಪೀ ಕ್ರಿಯೆಗಳನ್ನು ಶ್ರೇಯಸ್ಸಿನ ಇಚ್ಛೆಯುಳ್ಳ ಪುರುಷರು ಮಾಡುತ್ತಾರೆ. (17.25)
- ‘ಸತ್’ಈ ಪರಮಾತ್ಮನ ಹೆಸರನ್ನು ಸತ್ಯಭಾವದಲ್ಲಿ ಮತ್ತು ಶ್ರೇಷ್ಠಭಾವದಲ್ಲಿ ಪ್ರಯೋಗಿಸಲಾಗುತ್ತದೆ. ಹಾಗೆಯೇ ಪಾರ್ಥನೇ! ಉತ್ತಮವಾದ ಕರ್ಮದಲ್ಲಿಯೂ ‘ಸತ್‘ ಶಬ್ದವನ್ನು ಪ್ರಯೋಗಿಸಲಾಗುತ್ತದೆ. (17.26)
- ಹಾಗೆಯೇ ಯಜ್ಞ, ತಪಸ್ಸು ಮತ್ತು ದಾನದಲ್ಲಿ ಇರುವ ಸ್ಥಿತಿಯನ್ನೂ, ಕೂಡ ‘ಸತ್’ ಎಂದು ಹೇಳಲಾಗುತ್ತದೆ ಮತ್ತು ಪರಮಾತ್ಮನಿಗಾಗಿ ಮಾಡಿದ ಕರ್ಮವು ನಿಶ್ಚಯವಾಗಿ ‘ಸತ್’ ಎಂದು ಹೇಳಲಾಗುತ್ತದೆ. (17.27)
- ಎಲೈ ಅರ್ಜುನ! ಶ್ರದ್ಧೆಯಿಲ್ಲದೆ ಮಾಡಿದ ಹವನ, ಕೊಟ್ಟ ದಾನ, ಮಾಡಿದ ತಪಸ್ಸು ಮತ್ತು ಮಾಡಿದ ಶುಭಕರ್ಮಗಳೆಲ್ಲವೂ ‘ಅಸತ್’ ಎಂದು ಹೇಳಲಾಗುತ್ತದೆ. ಆದ್ದರಿಂದ ಅದು ಈ ಲೋಕದಲ್ಲಾಗಲೀ, ಪರಲೋಕದಲ್ಲಾಗಲೀ ಲಾಭದಾಯಕವಾಗುವುದಿಲ್ಲ. (17.28)