Chapter 1
- ಸಂಜಯನು ಹೇಳಿದನು – ಹೀಗೆ ಕರುಣೆಯಿಂದ ವ್ಯಾಪ್ತನಾದ ಕಂಬನಿತುಂಬಿ ವ್ಯಾಕುಲ ಕಣ್ಣುಗಳುಳ್ಳವನಾದ, ಶೋಕಿಸುತ್ತಿರುವ ಅರ್ಜುನನಲ್ಲಿ ಭಗವಾನ್ ಮಧುಸೂದನನು ಹೀಗೆ ಹೇಳಿದನು. ॥1॥
Chapter 3
Chapter 14
- ಶ್ರೀಭಗವಂತನು ಹೇಳಿದನು – ಜ್ಞಾನಗಳಲ್ಲಿ ಅತ್ಯುತ್ತಮವಾದ ಪರಮ ಜ್ಞಾನವನ್ನು ನಾನು ನಿನಗೆ ಪುನಃ ಹೇಳುವೆನು. ಅದನ್ನು ತಿಳಿದು ಎಲ್ಲ ಮುನಿಜನರು ಈ ಜಗತ್ತಿನಿಂದ ಮುಕ್ತರಾಗಿ ಪರಮ ಸಿದ್ಧಿಯನ್ನು ಪಡೆದಿದ್ದಾರೆ. (14.1)
- ಈ ಜ್ಞಾನವನ್ನು ಆಶ್ರಯಿಸಿ ಅಂದರೆ ಧಾರಣೆ ಮಾಡಿ ನನ್ನ ಸ್ವರೂಪವನ್ನು ಪಡೆದ ಪುರುಷರು ಸೃಷ್ಟಿಯ ಪ್ರಾರಂಭದಲ್ಲಿ ಪುನಃ ಹುಟ್ಟುವುದಿಲ್ಲ ಮತ್ತು ಪ್ರಳಯ ಕಾಲದಲ್ಲಿಯೂ ದುಃಖಿತರಾಗುವುದಿಲ್ಲ. (14.2)
- ಎಲೈ ಅರ್ಜುನ! ನನ್ನ ಮಹದ್ ಬ್ರಹ್ಮರೂಪೀ ಮೂಲಪ್ರಕೃತಿಯು ಸಮಸ್ತ ಪ್ರಾಣಿಗಳ ಯೋನಿಯಾಗಿದೆ. ಅರ್ಥಾತ್ ಗರ್ಭಾಧಾನದ ಸ್ಥಾನವಾಗಿದೆ. ನಾನು ಆ ಯೋನಿಯಲ್ಲಿ ಚೇತನ ಸಮುದಾಯರೂಪೀ ಗರ್ಭವನ್ನು ಸ್ಥಾಪಿಸುತ್ತೇನೆ. ಆ ಜಡ-ಚೇತನ ಸಂಯೋಗದಿಂದ ಎಲ್ಲ ಪ್ರಾಣಿಗಳ ಉತ್ಪತ್ತಿಯಾಗುತ್ತದೆ. (14.3)
- ಎಲೈ ಅರ್ಜುನ! ನಾನಾ ಪ್ರಕಾರದ ಎಲ್ಲ ಯೋನಿಗಳಲ್ಲಿ ಹುಟ್ಟುವ ಶರೀರಧಾರೀ ಪ್ರಾಣಿಗಳಿಗೆಲ್ಲರಿಗೆ ಗರ್ಭಧರಿಸುವ ತಾಯಿ ಪ್ರಕೃತಿಯಾಗಿದೆ ಮತ್ತು ಬೀಜವನ್ನು ಸ್ಥಾಪಿಸುವ ತಂದೆ ನಾನಾಗಿದ್ದೇನೆ. (14.4)
- ಎಲೈ ಅರ್ಜುನ! ಸತ್ತ್ವಗುಣ, ರಜೋಗುಣ ಮತ್ತು ತಮೋಗುಣ ಎಂಬ ಮೂರು ಗುಣಗಳು ಪ್ರಕೃತಿಯಿಂದ ಉತ್ಪನ್ನವಾಗಿ ಅವಿನಾಶೀ ಜೀವಾತ್ಮನನ್ನು ದೇಹದಲ್ಲಿ ಬಂಧಿಸುತ್ತವೆ. (14.5)
- ಎಲೈ ಪಾಪರಹಿತನೇ! ಆ ಮೂರು ಗುಣಗಳಲ್ಲಿ ಸತ್ವಗುಣವು ನಿರ್ಮಲವಾದ ಕಾರಣ ಪ್ರಕಾಶ ಉಂಟುಮಾಡುವುದು ಹಾಗೂ ವಿಕಾರರಹಿತವಾಗಿದೆ. ಆದರೆ ಅದು ಸುಖದ ಸಂಬಂಧದ ಮತ್ತು ಜ್ಞಾನ ಸಂಬಂಧದ ಅಭಿಮಾನದಿಂದ ಬಂಧಿಸುತ್ತದೆ. (14.6)
- ಎಲೈ ಅರ್ಜುನ! ರಾಗರೂಪೀ ರಜೋಗುಣವು ಕಾಮನೆ ಮತ್ತು ಆಸಕ್ತಿಯಿಂದ ಉತ್ಪನ್ನವಾದುದು ಎಂದು ತಿಳಿ. ಅದು ಈ ಜೀವಾತ್ಮನನ್ನು ಕರ್ಮಗಳ ಹಾಗೂ ಅವುಗಳ ಫಲಗಳ ಸಂಬಂಧದಿಂದ ಬಂಧಿಸುತ್ತದೆ. (14.7)
- ಎಲೈ ಅರ್ಜುನ! ಎಲ್ಲ ದೇಹಾಭಿಮಾನಿಗಳನ್ನು ಮೋಹಗೊಳಿಸುವ ತಮೋಗುಣವು ಅಜ್ಞಾನದಿಂದ ಉಂಟಾಗಿದೆ ಎಂದು ತಿಳಿ. ಅದು ಈ ಜೀವಾತ್ಮನನ್ನು ಪ್ರಮಾದ, ಆಲಸ್ಯ ಮತ್ತು ನಿದ್ದೆ ಇವುಗಳಿಂದ ಬಂಧಿಸುತ್ತದೆ. (14.8)
- ಎಲೈ ಅರ್ಜುನ! ಸತ್ತ್ವಗುಣವು ಸುಖದಲ್ಲಿ ತೊಡಗಿಸುತ್ತದೆ. ರಜೋಗುಣವು ಕರ್ಮಗಳಲ್ಲಿ ಮತ್ತು ತಮೋಗುಣವು ಜ್ಞಾನವನ್ನು ಮುಚ್ಚಿಹಾಕಿ ಪ್ರಮಾದದಲ್ಲಿಯೂ ತೊಡಗಿಸುತ್ತದೆ. (14.9)
- ಎಲೈ ಅರ್ಜುನ! ರಜೋಗುಣ ಮತ್ತು ತಮೋಗುಣಗಳನ್ನು ಅದುಮಿ ಸತ್ತ್ವಗುಣವು ವೃದ್ಧಿಸುತ್ತದೆ. ಸತ್ತ್ವಗುಣ ಹಾಗೂ ತಮೋಗುಣಗಳನ್ನು ಅದುಮಿ ರಜೋಗುಣವು ಬೆಳೆಯುತ್ತದೆ, ಹಾಗೆಯೇ ಸತ್ತ್ವಗುಣ ಮತ್ತು ರಜೋಗುಣಗಳನ್ನು ಅದುಮಿ ತಮೋಗುಣವು ಬೆಳೆಯುತ್ತದೆ. (14.10)
- ಈ ದೇಹದಲ್ಲಿ ಅಂತಃಕರಣದಲ್ಲಿ ಮತ್ತು ಇಂದ್ರಿಯಗಳಲ್ಲಿ ಚೈತನ್ಯ ಹಾಗೂ ವಿವೇಕ ಶಕ್ತಿಯು ಉಂಟಾದಾಗ ಸತ್ತ್ವಗುಣವು ಹೆಚ್ಚಾಗಿದೆ ಎಂದು ತಿಳಿಯಬೇಕು. (14.11)
- ಎಲೈ ಅರ್ಜುನ! ರಜೋಗುಣವು ಹೆಚ್ಚಾದಾಗ ಲೋಭ, ಪ್ರವೃತ್ತಿ, ಸ್ವಾರ್ಥಪ್ರೇರಿತನಾಗಿ ಸಕಾಮಭಾವದಿಂದ ಕರ್ಮಮಾಡುವುದು, ಅಶಾಂತಿ ಮತ್ತು ವಿಷಯ ಭೋಗಗಳ ಲಾಲಸೆ-ಇವೆಲ್ಲವೂ ಉಂಟಾಗುತ್ತವೆ. (14.12)
- ಎಲೈ ಅರ್ಜುನ! ತಮೋಗುಣವು ಹೆಚ್ಚಾದಾಗ ಅಂತಃಕರಣ ಮತ್ತು ಇಂದ್ರಿಯಗಳಲ್ಲಿ ಅಂಧಕಾರ, ಕರ್ತವ್ಯ ಕರ್ಮಗಳಲ್ಲಿ ಅಪ್ರವೃತ್ತಿ, ವ್ಯರ್ಥ ಚೇಷ್ಟೆಗಳು ಹಾಗೂ ನಿದ್ದೆ ಮುಂತಾದವು ಅಂತಃಕರಣವನ್ನು ಮೋಹಿತಗೊಳಿಸುವ ವೃತ್ತಿಗಳು – ಇವೆಲ್ಲವೂ ಉಂಟಾಗುತ್ತವೆ. (14.13)
- ಸತ್ತ್ವಗುಣವು ಹೆಚ್ಚಿದಾಗ ಮನುಷ್ಯನು ಸತ್ತರೆ, ಆಗ ಅವನು ಉತ್ತಮ ಕರ್ಮ ಮಾಡುವವರ ನಿರ್ಮಲ, ದಿವ್ಯ, ಸ್ವರ್ಗಾದಿ ಲೋಕಗಳನ್ನು ಪಡೆಯುತ್ತಾನೆ. (14.14)
- ರಜೋಗುಣವು ಬೆಳೆದಾಗ ಸತ್ತರೆ ಕರ್ಮಗಳಲ್ಲಿ ಆಸಕ್ತಿಯುಳ್ಳ ಮನುಷ್ಯರಲ್ಲಿ ಹುಟ್ಟುವನು. ಹಾಗೆಯೇ ತಮೋಗುಣವು ಹೆಚ್ಚಾದಾಗ ಸತ್ತ ಮನುಷ್ಯನು ಕೀಟ, ಪಶು ಮುಂತಾದ ಮೂಢ (ವಿವೇಕ ಶೂನ್ಯ) ಯೋನಿಗಳಲ್ಲಿ ಹುಟ್ಟುತ್ತಾನೆ. (14.15)
- ಶ್ರೇಷ್ಠವಾದ ಕರ್ಮಗಳ ಫಲವು ಸಾತ್ವಿಕ ಅಂದರೆ ಸುಖ, ಜ್ಞಾನ ಮತ್ತು ವೈರಾಗ್ಯವೇ ಮುಂತಾದ ನಿರ್ಮಲ
ವೆಂದೂ ಹೇಳಲಾಗಿದೆ. ರಾಜಸ ಕರ್ಮಗಳ ಫಲವು ದುಃಖವೆಂದೂ, ತಾಮಸ ಕರ್ಮಗಳ ಫಲವು ಅಜ್ಞಾನವೆಂದೂ ಹೇಳಲಾಗಿದೆ. (14.16) - ಸತ್ತ್ವ ಗುಣದಿಂದ ಜ್ಞಾನವು ಉಂಟಾಗುತ್ತದೆ. ರಜೋಗುಣದಿಂದ ನಿಸ್ಸಂದೇಹವಾಗಿ ಲೋಭವು ಹಾಗೂ ತಮೋಗುಣದಿಂದ ಪ್ರಮಾದ, ಮೋಹಗಳು ಮತ್ತು ಅಜ್ಞಾನವೂ ಉಂಟಾಗುತ್ತವೆ. (14.17)
- ಸತ್ತ್ವಗುಣದಲ್ಲಿ ಸ್ಥಿತರಾದ ಮನುಷ್ಯರು ಸ್ವರ್ಗಾದಿ ಉಚ್ಚ ಲೋಕಗಳಿಗೆ ಹೋಗುತ್ತಾರೆ. ರಜೋಗುಣದಲ್ಲಿ ನೆಲೆಸಿದವರು ಮಧ್ಯದಲ್ಲಿ ಅರ್ಥಾತ್ ಮನುಷ್ಯ ಲೋಕದಲ್ಲೇ ಇರುತ್ತಾರೆ ಮತ್ತು ತಮೋಗುಣದ ಕಾರ್ಯರೂಪೀ ನಿದ್ದೆ, ಪ್ರಮಾದ, ಆಲಸ್ಯಾದಿಗಳಲ್ಲಿ ನೆಲೆನಿಂತ ತಾಮಸ ಪುರುಷರು ಅಧೋಗತಿಗೆ ಅಂದರೆ, ಕೀಟ, ಪಶು ಮೊದಲಾದ ನೀಚ ಯೋನಿಗಳಲ್ಲಿ ಹಾಗೂ ನರಕಗಳಿಗೆ ಹೋಗುತ್ತಾರೆ. (14.18)
- ದೃಷ್ಟಾ ಅಂದರೆ ಸಮಷ್ಟಿ ಚೇತನದಲ್ಲಿ ಏಕೀಭಾವದಿಂದ ನೆಲೆಸಿದ ಸಾಕ್ಷೀ ಪುರುಷನು ಮೂರು ಗುಣಗಳಿಲ್ಲದೆ ಬೇರೆ ಯಾರನ್ನು ಕರ್ತಾ ಎಂದು ನೋಡದಿದ್ದಾಗ, ತ್ರಿಗುಣಗಳಿಗಿಂತ ಅತ್ಯಂತ ಶ್ರೇಷ್ಠವಾದ ಸಚ್ಚಿದಾನಂದಘನ ಸ್ವರೂಪೀ ಪರಮಾತ್ಮನಾದ ನನ್ನನ್ನು ತತ್ತ್ವದಿಂದ ತಿಳಿಯುವ ಸಮಯದಲ್ಲೇ ನನ್ನ ಸ್ವರೂಪವನ್ನು ಹೊಂದುತ್ತಾನೆ. (14.19)
- ಈ ಪುರುಷನು ಶರೀರದ ಉತ್ಪತ್ತಿಗೆ ಕಾರಣವಾದ ಮೂರು ಗುಣಗಳನ್ನು ದಾಟಿ ಜನ್ಮ, ಮೃತ್ಯು, ವೃದ್ಧಾವಸ್ಥೆ ಮತ್ತು ಎಲ್ಲ ರೀತಿಯ ದುಃಖಗಳಿಂದ ಮುಕ್ತನಾಗಿ ಪರಮಾನಂದವನ್ನು ಪಡೆಯುತ್ತಾನೆ. (14.20)
- ಅರ್ಜುನನು ಹೇಳಿದನು – ಈ ಮೂರು ಗುಣಗಳಿಂದಲೂ ಅತೀತನಾದ ಪುರುಷನು ಯಾವ-ಯಾವ ಲಕ್ಷಣಗಳಿಂದ ಕೂಡಿರುತ್ತಾನೆ? ಹಾಗೂ ಅವನ ಆಚರಣೆ ಹೇಗಿರುತ್ತದೆ? ಹಾಗೆಯೇ ಪ್ರಭುವೇ! ಮನುಷ್ಯನು ಯಾವ ಉಪಾಯದಿಂದ ಈ ಮೂರು ಗುಣಗಳನ್ನು ದಾಟಿ ಹೋಗುತ್ತಾನೆ? (14.21)
- ಶ್ರೀಭಗವಂತನು ಹೇಳಿದನು – ಎಲೈ ಅರ್ಜುನ ! ಯಾವ ಪರುಷನು ಸತ್ತ್ವಗುಣದ ಕಾರ್ಯರೂಪೀ ಪ್ರಕಾಶವನ್ನು, ರಜೋಗುಣದ ಕಾರ್ಯರೂಪೀ ಪ್ರವೃತ್ತಿಯನ್ನು ಮತ್ತು ತಮೋಗುಣದ ಕಾರ್ಯರೂಪೀ ಮೋಹ ಇವುಗಳು ಪ್ರಾಪ್ತವಾದರೂ ಅವುಗಳನ್ನು ದ್ವೇಷಿಸುವುದಿಲ್ಲ ಹಾಗೂ ನಿವೃತ್ತನಾದ ಮೇಲೆ ಅವುಗಳನ್ನು ಬಯಸುವುದಿಲ್ಲ. (14.22)
- ಸಾಕ್ಷಿಯಂತೆ ಇದ್ದು ಗುಣಗಳ ಮೂಲಕ ವಿಚಲಿತಗೊಳಿಸಲಾಗುವುದಿಲ್ಲ ಮತ್ತು ಗುಣಗಳೇ ಗುಣಗಳಲ್ಲಿ ವರ್ತಿಸುತ್ತವೆ ಎಂದು ತಿಳಿಯುತ್ತಾ, ಸಚ್ಚಿದಾನಂದಘನ ಪರಮಾತ್ಮನಲ್ಲಿ ಏಕೀಭಾವದಿಂದ ಇರುತ್ತಾ ಮತ್ತು ಆ ಸ್ಥಿತಿಯಿಂದ ಎಂದೂ ಕದಲಲಾರನು – (14.23)
- ನಿರಂತರ ಆತ್ಮಭಾವದಲ್ಲಿ ನೆಲೆಸಿರುವವನು, ಸುಖ-ದುಃಖಗಳನ್ನು ಸಮಾನವಾಗಿ ತಿಳಿಯುವವನು, ಕಲ್ಲು, ಮಣ್ಣು ಮತ್ತು ಚಿನ್ನಗಳನ್ನು ಸಮಾನವಾಗಿ ತಿಳಿಯುವವನು, ಜ್ಞಾನಿಯಾದವನು, ಪ್ರಿಯ ಹಾಗೂ ಅಪ್ರಿಯಗಳನ್ನು ಒಂದೇ ಎಂದು ತಿಳಿಯುವವನು, ನಿಂದಾ-ಸ್ತುತಿಗಳಲ್ಲಿ ಸಮಭಾವ ಉಳ್ಳವನು – (14.24)
- ಮಾನ-ಅಪಮಾನ ಒಂದೇ ಎಂದು ತಿಳಿಯುವವನು, ಮಿತ್ರ ಮತ್ತು ಶತ್ರು ಇವರ ವಿಷಯದಲ್ಲಿ ಸಮನಾಗಿರುವವನು ಮತ್ತು ಸಮಸ್ತ ಕರ್ಮಗಳಲ್ಲಿ ಕರ್ತೃತ್ವದ ಅಭಿಮಾನರಹಿತನಾಗಿರುವ ಪುರುಷನನ್ನು ಗುಣಾತೀತನೆಂದು ಹೇಳುತ್ತಾರೆ. (14.25)
- ಅವ್ಯಭಿಚಾರೀ ಭಕ್ತಿಯೋಗದಿಂದ ನನ್ನನ್ನು ನಿರಂತರ ಭಜಿಸುವವನೂ ಕೂಡ ಈ ಮೂರು ಗುಣಗಳನ್ನು ಪೂರ್ಣವಾಗಿ ದಾಟಿ ಸಚ್ಚಿದಾನಂದಘನ ಬ್ರಹ್ಮನನ್ನು ಪಡೆಯಲು ಯೋಗ್ಯನಾಗುತ್ತಾನೆ. (14.26)
- ಏಕೆಂದರೆ ಆ ಅವಿನಾಶೀ ಪರಬ್ರಹ್ಮನ, ಅಮೃತದ, ನಿತ್ಯವಾದ ಧರ್ಮದ ಮತ್ತು ಅಖಂಡ ಏಕರಸ ಆನಂದದ ಆಶ್ರಯವು ನಾನೇ ಆಗಿದ್ದೇನೆ. (14.27)
Chapter 15
- ಶ್ರೀಭಗವಂತನು ಹೇಳಿದನು – ಆದಿಪುರುಷ ಪರಮೇಶ್ವರನು ಬೇರು ಆಗಿರುವ, ಬ್ರಹ್ಮದೇವರೇ ಮುಖ್ಯಕಾಂಡವಾಗಿರುವ ಜಗದ್ರೂಪೀ ಅಶ್ವತ್ಥವೃಕ್ಷವನ್ನು ಅವಿನಾಶೀ ಎಂದು ಹೇಳುತ್ತಾರೆ. ಹಾಗೆಯೇ ವೇದಗಳು ಅದರ ಎಲೆಗಳೆಂದು ಹೇಳಲಾಗಿದೆ. ಆ ಜಗದ್ರೂಪೀ ಅಶ್ವತ್ಥವೃಕ್ಷವನ್ನು ಮೂಲಸಹಿತ ತತ್ತ್ವತಃ ತಿಳಿದವನು ವೇದಗಳ ತಾತ್ಪರ್ಯವನ್ನು ತಿಳಿದವನಾಗಿದ್ದಾನೆ. (15.1)
- ಆ ಜಗತ್ವೃಕ್ಷಕ್ಕೆ – ತ್ರಿಗುಣರೂಪೀ ನೀರಿನಿಂದ ಬೆಳೆದಿರುವ ವಿಷಯ ಭೋಗರೂಪೀ ಚಿಗುರುಗಳುಳ್ಳ ದೇವ, ಮನುಷ್ಯ ಮತ್ತು ತಿರ್ಯಕ್ ಮೊದಲಾದ ಯೋನಿರೂಪವಾದ ರೆಂಬೆಗಳು ಕೆಳಗೆ, ಮೇಲೆ ಎಲ್ಲೆಲ್ಲಿಯೂ ಹರಡಿಕೊಂಡಿವೆ ಹಾಗೂ ಮನುಷ್ಯ ಜನ್ಮದಲ್ಲಿ ಕರ್ಮಗಳಿಗನುಸಾರ ಬಂಧಿಸುವಂತಹ ಅಹಂತೆ, ಮಮತೆ ಮತ್ತು ವಾಸನಾರೂಪೀ ಬೀಳಲುಗಳೂ ಮೇಲೆ, ಕೆಳಗೆ ಎಲ್ಲ ಲೋಕಗಳಲ್ಲಿ ಹರಡಿಕೊಂಡಿವೆ. (15.2)
- ಈ ಸಂಸಾರವೃಕ್ಷದ ಸ್ವರೂಪವು ಹೇಗೆ ಹೇಳಲಾಗಿದೆಯೋ ಹಾಗೆ ಇಲ್ಲಿ ವಿಚಾರಕಾಲದಲ್ಲಿ ಕಂಡುಬರುವುದಿಲ್ಲ. ಏಕೆಂದರೆ ಇದರ ಆದಿಯಾಗಲೀ, ಅಂತ್ಯವಾಗಲೀ ಇಲ್ಲ. ಹಾಗೆಯೇ ಅದರ ಉತ್ತಮ ರೀತಿಯ ಸ್ಥಿರತೆಯೂ ಇಲ್ಲ. ಅದಕ್ಕಾಗಿ ಈ ಅಹಂತೆ, ಮಮತೆ ಮತ್ತು ವಾಸನಾರೂಪೀ ಬಹಳ ಗಟ್ಟಿಯಾದ ಬೇರುಗಳುಳ್ಳ ಜಗತ್ರೂಪೀ ಅಶ್ವತ್ಥವೃಕ್ಷವನ್ನು ದೃಢವಾದ ವೈರಾಗ್ಯರೂಪೀ ಶಸದಿಂದ ಕತ್ತರಿಸಿ – (15.3)
- ಬಳಿಕ ಆ ಪರಮಪದರೂಪೀ ಪರಮೇಶ್ವರನನ್ನು ಚೆನ್ನಾಗಿ ಅರಸಬೇಕು. ಅಲ್ಲಿಗೆ ಹೋಗಿರುವ ಪುರುಷರು ಮತ್ತೆ ಸಂಸಾರಕ್ಕೆ ಬರುವುದಿಲ್ಲ ಹಾಗೂ ಯಾವ ಪರಮೇಶ್ವರನಿಂದ ಪುರಾತನ ಜಗದ್ರೂಪೀ ವೃಕ್ಷದ ಪರಂಪರೆ ವಿಸ್ತಾರಗೊಂಡಿದೆಯೋ ಆ ಆದಿಪುರುಷ ನಾರಾಯಣನಿಗೆ ನಾನು ಶರಣಾಗಿದ್ದೇನೆ ಎಂಬ ದೃಢ ನಿಶ್ಚಯದಿಂದ ಆ ಪರಮೇಶ್ವರನನ್ನು ಮನನ ಮತ್ತು ನಿದಿಧ್ಯಾಸನ ಮಾಡಬೇಕು. (15.4)
- ಮಾನ-ದೊಡ್ಡಸ್ತಿಕೆ ಮತ್ತು ಮೋಹ ನಾಶವಾಗಿರುವ, ಆಸಕ್ತಿರೂಪ ದೋಷವನ್ನು ಜಯಿಸಿದ, ಪರಮಾತ್ಮನ ಸ್ವರೂಪದಲ್ಲಿ ನಿತ್ಯಸ್ಥಿತಿಯಿರುವ ಹಾಗೆಯೇ ಕಾಮನೆಗಳು ಪೂರ್ಣವಾಗಿ ನಾಶವಾದ, ಸುಖ-ದುಃಖಗಳೆಂಬ ದ್ವಂದ್ವಗಳಿಂದ ವಿಮುಕ್ತರಾದ ಜ್ಞಾನೀಜನರು ಅವಿನಾಶೀ ಪರಮಪದವನ್ನು ಪಡೆಯುತ್ತಾರೆ. (15.5)
- ಆ ಸ್ವಯಂಪ್ರಕಾಶ ಪರಮಪದವನ್ನು ಸೂರ್ಯನಾಗಲೀ, ಚಂದ್ರನಾಗಲೀ, ಇಲ್ಲವೇ ಅಗ್ನಿಯೂ ಪ್ರಕಾಶಿಸಲಾರರು. ಆ ಪರಮಪದವನ್ನು ಪಡೆದ ಮನುಷ್ಯನು ಮರಳಿ ಸಂಸಾರಕ್ಕೆ ಬರುವುದಿಲ್ಲ. ಅದೇ ನನ್ನ ಪರಮಧಾಮವಾಗಿದೆ. (15.6)
- ಈ ದೇಹದಲ್ಲಿ ಇರುವ ಸನಾತನ ಜೀವಾತ್ಮನು ನನ್ನ ಅಂಶನೇ ಆಗಿದ್ದಾನೆ ಮತ್ತು ಅವನೇ ಈ ಪ್ರಕೃತಿಯಲ್ಲಿ ಸ್ಥಿತನಾಗಿ ಮನಸ್ಸು ಹಾಗೂ ಐದು ಇಂದ್ರಿಯಗಳನ್ನು ಆಕರ್ಷಿಸುತ್ತಾನೆ. (15.7)
- ವಾಯುವು ಸುಗಂಧ ವಸ್ತುವಿನಿಂದ ಪರಿಮಳವನ್ನು ಗ್ರಹಣಮಾಡಿ ತೆಗೆದುಕೊಂಡು ಹೋಗುವಂತೆಯೇ ದೇಹಾದಿಗಳ ಸ್ವಾಮಿಯಾದ ಜೀವಾತ್ಮನು ತ್ಯಜಿಸಿದ ಶರೀರದಿಂದ ಮನಸಹಿತ ಇಂದ್ರಿಯಗಳನ್ನು ಗ್ರಹಣಮಾಡಿ ಹೊಸದಾಗಿ ಸಿಗುವ ಶರೀರವನ್ನು ಪ್ರವೇಶಿಸುವನು. (15.8)
- ಜೀವಾತ್ಮನು ಕಿವಿ, ಕಣ್ಣು, ಚರ್ಮ, ನಾಲಿಗೆ, ಮೂಗು ಮತ್ತು ಮನಸ್ಸು ಇವುಗಳನ್ನು ಆಶ್ರಯಿಸಿ ವಿಷಯಗಳನ್ನು ಅನುಭವಿಸುತ್ತಾನೆ. (15.9)
- ಶರೀರವನ್ನು ಬಿಟ್ಟು ಹೋಗುವಾಗ ಇಲ್ಲವೇ ಶರೀರದಲ್ಲಿ ಇರುವಾಗ ಅಥವಾ ವಿಷಯಗಳನ್ನು ಭೋಗಿಸುವಾಗ, ಇಲ್ಲವೇ ಮೂರು ಗುಣಗಳಿಂದ ಕೂಡಿರುವಾಗಲೂ (ಆ ಆತ್ಮಸ್ವರೂಪವನ್ನು) ಅಜ್ಞಾನಿಗಳು ತಿಳಿಯಲಾರರು. ಕೇವಲ ಜ್ಞಾನರೂಪೀ ದೃಷ್ಟಿಯುಳ್ಳ ವಿವೇಕೀ ಜ್ಞಾನಿಗಳೇ ತತ್ತ್ವದಿಂದ ತಿಳಿಯುತ್ತಾರೆ. (15.10)
- ಪ್ರಯತ್ನಶೀಲರಾದ ಯೋಗೀ ಜನರೇ ತಮ್ಮ ಹೃದಯದಲ್ಲಿ ಸ್ಥಿತನಾಗಿರುವ ಈ ಆತ್ಮನನ್ನು ತತ್ತ್ವದಿಂದ ಬಲ್ಲರು, ಆದರೆ ತಮ್ಮ ಅಂತಃಕರಣವನ್ನು ಶುದ್ಧಮಾಡಿಕೊಳ್ಳದ ಅಜ್ಞಾನೀ ಜನರು ಪ್ರಯತ್ನ ಮಾಡಿದರೂ ಈ ಆತ್ಮಸ್ವರೂಪವನ್ನು ತಿಳಿಯಲಾರರು. (15.11)
- ಸಂಪೂರ್ಣ ಜಗತ್ತನ್ನು ಪ್ರಕಾಶಗೊಳಿಸುವ ಸೂರ್ಯನ ತೇಜಸ್ಸು, ಚಂದ್ರನಲ್ಲಿರುವ ತೇಜಸ್ಸು, ಅಗ್ನಿಯಲ್ಲಿರುವ ತೇಜಸ್ಸು ನನ್ನದೇ ತೇಜಸ್ಸು ಎಂದು ನೀನು ತಿಳಿ. (15.12)
- ಮತ್ತು ನಾನೇ ಪೃಥಿವಿಯಲ್ಲಿ ಪ್ರವೇಶಿಸಿ ನನ್ನ ಶಕ್ತಿಯಿಂದ ಎಲ್ಲ ಪ್ರಾಣಿಗಳನ್ನು ಧರಿಸುತ್ತೇನೆ ಮತ್ತು ರಸರೂಪೀ ಅರ್ಥಾತ್ ಅಮೃತಮಯ ಚಂದ್ರನಾಗಿ ಸಂಪೂರ್ಣ ವನಸ್ಪತಿಗಳನ್ನು ಪೋಷಿಸುತ್ತೇನೆ. (15.13)
- ನಾನೇ ಎಲ್ಲ ಪ್ರಾಣಿಗಳ ಶರೀರದಲ್ಲಿ ಸ್ಥಿತನಾಗಿ ಪ್ರಾಣ ಮತ್ತು ಅಪಾನಗಳಿಂದ ಕೂಡಿದ ವೈಶ್ವಾನರ ಅಗ್ನಿರೂಪನಾಗಿ ನಾಲ್ಕು ಪ್ರಕಾರದ ಅನ್ನವನ್ನು ಜೀರ್ಣಗೊಳಿಸುತ್ತೇನೆ. (15.14)
- ನಾನೇ ಎಲ್ಲ ಪ್ರಾಣಿಗಳ ಹೃದಯದಲ್ಲಿ ಅಂತರ್ಯಾಮಿಯಾಗಿ ನೆಲೆಸಿದ್ದೇನೆ. ನನ್ನಿಂದಲೇ ಸ್ಮೃತಿ, ಜ್ಞಾನ ಉಂಟಾಗಿ, ಸಂಶಯಾದಿ ದೋಷಗಳ ನಿವಾರಣೆಯಾಗುತ್ತದೆ. ಎಲ್ಲ ವೇದಗಳ ಮೂಲಕ ತಿಳಿಯಲು ನಾನೇಯೋಗ್ಯನಾಗಿದ್ದೇನೆ ಹಾಗೂ ವೇದಾಂತದ ಕರ್ತೃ ಮತ್ತು ವೇದಗಳನ್ನು ಬಲ್ಲವನೂ ನಾನೇ ಆಗಿದ್ದೇನೆ. (15.15)
- ಈ ಜಗತ್ತಿನಲ್ಲಿ ನಾಶವಾಗುವ ಮತ್ತು ನಾಶವಾಗದಿರುವ ಎರಡು ಪ್ರಕಾರದ ಪುರುಷರಿದ್ದಾರೆ. ಇದರಲ್ಲಿ ಸಂಪೂರ್ಣ ಭೂತಪ್ರಾಣಿಗಳ ಶರೀರಗಳು ನಾಶವಾಗುವಂತಹುದು ಮತ್ತು ಜೀವಾತ್ಮನು ಅವಿನಾಶಿಯೆಂದು ಹೇಳಲಾಗಿದೆ. (15.16)
- ಇವರಿಬ್ಬರಿಗಿಂತ ಉತ್ತಮ ಪುರುಷನಾದರೋ ಬೇರೆಯೇ ಆಗಿದ್ದಾನೆ. ಅವನು ಮೂರು ಲೋಕಗಳಲ್ಲಿ ಪ್ರವೇಶಮಾಡಿ ಎಲ್ಲರ ಧಾರಣೆ-ಪೋಷಣೆ ಮಾಡುತ್ತಾನೆ. ಹಾಗೆಯೇ ಅವನನ್ನು ಅವಿನಾಶೀ ಪರಮೇಶ್ವರ ಮತ್ತು ಪರಮಾತ್ಮಾ ಎಂದು ಹೇಳಲಾಗಿದೆ. (15.17)
- ಏಕೆಂದರೆ ನಾಶವಾಗುವ ಜಡವರ್ಗ – ಕ್ಷೇತ್ರಕ್ಕಿಂತ ನಾನು ಸರ್ವಥಾ ಅತೀತನಾಗಿದ್ದೇನೆ ಹಾಗೂ ಅವಿನಾಶೀ ಜೀವಾತ್ಮನಿಗಿಂತಲೂ ಉತ್ತಮನಾಗಿದ್ದೇನೆ. ಆದ್ದರಿಂದ ಲೋಕದಲ್ಲಿ ಮತ್ತು ವೇದದಲ್ಲಿಯೂ ಪುರುಷೋತ್ತಮ ಎಂಬ ಹೆಸರಿನಿಂದ ಪ್ರಸಿದ್ಧನಾಗಿದ್ದೇನೆ. (15.18)
- ಎಲೈ ಅರ್ಜುನ! ಯಾವ ಜ್ಞಾನೀ ಪುರುಷನು ನನ್ನನ್ನು ಈ ರೀತಿಯಾಗಿ ತತ್ತ್ವದಿಂದ ಪುರುಷೋತ್ತಮನೆಂದು ತಿಳಿಯುತ್ತಾನೋ, ಆ ಸರ್ವಜ್ಞನಾದವನು ಎಲ್ಲ ವಿಧದಿಂದ ನಿರಂತರವಾಗಿ ವಾಸುದೇವ ಪರಮೇಶ್ವರನಾದ ನನ್ನನ್ನೇ ಭಜಿಸುತ್ತಾನೆ. (15.19)
- ಎಲೈ ನಿಷ್ಪಾಪನಾದ ಅರ್ಜುನ! ಹೀಗೆ ಈ ಅತಿರಹಸ್ಯಮಯ ಗೋಪ್ಯವಾದ ಶಾಸ್ತ್ರವನ್ನು ನಾನು ನಿನಗೆ ಹೇಳಿದೆನು. ಇದನ್ನು ತತ್ತ್ವಶಃ ತಿಳಿದ ಮನುಷ್ಯನು ಜ್ಞಾನಿಯೂ ಮತ್ತು ಕೃತಾರ್ಥನೂ ಆಗುತ್ತಾನೆ. (15.20)
Chapter 16
- ಶ್ರೀಭಗವಂತನು ಹೇಳಿದನು – ಭಯದ ಸರ್ವಥಾ ಅಭಾವ, ಅಂತಃಕರಣದ ಪೂರ್ಣ ನಿರ್ಮಲತೆ, ತತ್ತ್ವಜ್ಞಾನಕ್ಕಾಗಿ ಧ್ಯಾನಯೋಗದಲ್ಲಿ ನಿರಂತರ ದೃಢಸ್ಥಿತಿ ಮತ್ತು ಸಾತ್ವಿಕದಾನ, ಇಂದ್ರಿಯಗಳ ದಮನ, ಭಗವಂತನ, ದೇವತೆಗಳ, ಗುರುಜನರ ಪೂಜೆ, ಅಗ್ನಿಹೋತ್ರಾದಿ ಉತ್ತಮ ಕರ್ಮಗಳ ಆಚರಣೆ, ವೇದ ಶಾಸ್ತ್ರಗಳ ಪಠಣ-ಪಾಠಣ, ಭಗವಂತನ ನಾಮ ಮತ್ತು ಗುಣಗಳ ಕೀರ್ತನೆ, ಸ್ವಧರ್ಮಪಾಲನೆಗಾಗಿ ಕಷ್ಟವನ್ನು ಸಹಿಸುವುದು ಹಾಗೂ ಶರೀರ ಇಂದ್ರಿಯಗಳಸಹಿತ ಅಂತಃಕರಣದ ಸರಳತೆ – (16.1)
- ಮನಸ್ಸು, ಮಾತು, ಶರೀರದಿಂದ ಯಾರಿಗೂ ಯಾವ ರೀತಿಯಿಂದಲೂ ಕಷ್ಟಕೊಡದಿರುವುದು, ಯಥಾರ್ಥ ಹಾಗೂ ಪ್ರಿಯವಾಗಿ ಮಾತನಾಡುವುದು, ತನಗೆ ಅಪಕಾರ ಮಾಡಿದವರ ಮೇಲೆ ಸಿಟ್ಟಾಗದಿರುವುದು, ಕರ್ಮಗಳಲ್ಲಿ ಕರ್ತೃತ್ವದ ಅಭಿಮಾನ ತ್ಯಾಗ, ಅಂತಃಕರಣದಲ್ಲಿ ಚಂಚಲತೆ ಇಲ್ಲದಿರುವುದು, ಯಾರನ್ನೂ ನಿಂದಿಸದಿರುವುದು, ಎಲ್ಲ ಪ್ರಾಣಿಗಳಲ್ಲಿ ಕಾರಣರಹಿತ ದಯೆ, ಇಂದ್ರಿಯಗಳು ವಿಷಯಗಳೊಡನೆ ಸಂಯೋಗವಾದರೂ ಅದರಲ್ಲಿ ಆಸಕ್ತರಾಗದಿರುವುದು, ಕೋಮಲತೆ, ಲೋಕ ಮತ್ತು ಶಾಸ್ತ್ರಕ್ಕೆ ವಿರುದ್ಧವಾದ ಆಚರಣೆಯಲ್ಲಿ ಲಜ್ಜೆ ಹಾಗೂ ವ್ಯರ್ಥವಾದ ಚೇಷ್ಟೆಯ ಅಭಾವ – (16.2)
- ತೇಜಸ್ಸು, ಕ್ಷಮೆ, ಧೈರ್ಯ, ಬಾಹ್ಯಶುದ್ಧಿ, ಯಾರಲ್ಲಿಯೂ ಶತ್ರುತ್ವ ಇಲ್ಲದಿರುವುದು ಮತ್ತು ತನ್ನಲ್ಲಿ ಹಿರಿತನದ ಅಭಿಮಾನ ಇಲ್ಲದಿರುವಿಕೆ, ಎಲೈ ಅರ್ಜುನ! ಇವೆಲ್ಲ ದೈವೀ ಸಂಪತ್ತನ್ನು ಪಡೆದು ಜನಿಸಿರುವ ಪುರುಷರ ಲಕ್ಷಣಗಳಾಗಿವೆ. (16.3)
- ಎಲೈ ಅರ್ಜುನ! ದಂಭ, ಅಹಂಕಾರ, ಅಭಿಮಾನ, ಕ್ರೋಧ, ಕಠೋರತೆ ಮತ್ತು ಅಜ್ಞಾನ ಇವೆಲ್ಲ ಆಸುರೀ ಸಂಪತ್ತನ್ನು ಪಡೆದು ಹುಟ್ಟಿದ ಪುರುಷರ ಲಕ್ಷಣವಾಗಿದೆ. (16.4)
- ದೈವೀ ಸಂಪತ್ತು ಮುಕ್ತಿಗಾಗಿ ಮತ್ತು ಆಸುರೀ ಸಂಪತ್ತು ಬಂಧನಕಾರಕವೆಂದು ತಿಳಿಯಲಾಗಿದೆ. ಆದ್ದರಿಂದ ಎಲೈ ಅರ್ಜುನ! ನೀನು ಶೋಕಪಡಬೇಡ, ಏಕೆಂದರೆ ನೀನು ದೈವೀ ಸಂಪತ್ತನ್ನು ಪಡೆದು ಜನಿಸಿರುವೆ. (16.5)
- ಎಲೈ ಅರ್ಜುನ! ಈ ಜಗತ್ತಿನಲ್ಲಿ ಮನುಷ್ಯ ಸಮುದಾಯವು ಎರಡೇ ಪ್ರಕಾರಗಳಿಂದ ಇದೆ. ಒಂದು ದೈವೀ ಪ್ರಕೃತಿಯವರು, ಇನ್ನೊಂದು ಆಸುರೀ ಪ್ರಕೃತಿಯವರು. ಅವುಗಳಲ್ಲಿ ದೈವೀ ಪ್ರಕೃತಿಯನ್ನು ವಿಸ್ತಾರವಾಗಿ ಹೇಳಲಾಯಿತು. ಇನ್ನು ನೀನು ಆಸುರೀ ಪ್ರಕೃತಿಯ ಮನುಷ್ಯ ಸಮುದಾಯದ ಕುರಿತೂ ವಿಸ್ತಾರವಾಗಿ ನನ್ನಿಂದ ಕೇಳು. (16.6)
- ಆಸುರೀ ಸ್ವಭಾವದ ಜನರು ಪ್ರವೃತ್ತಿ ಮತ್ತು ನಿವೃತ್ತಿ ಎರಡನ್ನೂ ತಿಳಿಯರು. ಅದಕ್ಕಾಗಿ ಅವರಲ್ಲಿ ಅಂತರ್ಬಾಹ್ಯ ಶುದ್ಧಿಯಾಗಲೀ, ಉತ್ತಮ ಆಚರಣೆಯಾಗಲೀ, ಸತ್ಯಭಾಷಣವಾಗಲೀ ಇರುವುದಿಲ್ಲ. (16.7)
- ಆ ಆಸುರೀ ಸ್ವಭಾವದ ಜನರು – ಈ ಜಗತ್ತು ಆಶ್ರಯರಹಿತ, ಸರ್ವಥಾ ಅಸತ್ಯ ಮತ್ತು ದೇವರಿಲ್ಲದೆಯೇ ತನ್ನಿಂದ ತಾನೇ ಕೇವಲ ಸ್ತ್ರೀ-ಪುರುಷರ ಸಂಯೋಗದಿಂದ ಸೃಷ್ಟಿಯಾಗಿದೆ. ಆದ್ದರಿಂದ ಕಾಮವೇ ಇದರ ಕಾರಣವಾಗಿದೆ. ಇದಲ್ಲದೆ ಬೇರೇನಿದೆ? ಎಂದು ಹೇಳುತ್ತಾರೆ. (16.8)
- ಇಂತಹ ಮಿಥ್ಯಾಜ್ಞಾನವನ್ನು ಅವಲಂಬಿಸಿದ ಮನುಷ್ಯರ ಸ್ವಭಾವವು ನಾಶವಾಗಿ ಹೋಗಿದೆ. ಅವರ ಬುದ್ಧಿ ಮಂದವಾಗಿದೆ. ಎಲ್ಲರಿಗೂ ಅಪಕಾರ ಮಾಡುವ ಕ್ರೂರ ಕರ್ಮಿಗಳಾದ ಇವರು ಕೇವಲ ಜಗತ್ತಿನ ನಾಶಕ್ಕಾಗಿಯೇ ಸಮರ್ಥರಾಗಿರುತ್ತಾರೆ. (16.9)
- ದಂಭ, ಮಾನ, ಮದದಿಂದ ಕೂಡಿದ ಮನುಷ್ಯರು ಯಾವ ರೀತಿಯಿಂದಲೂ ಪೂರ್ಣವಾಗದ ಕಾಮನೆಗಳ ಆಶ್ರಯಪಡೆದು, ಅಜ್ಞಾನದಿಂದ ಮಿಥ್ಯಾ ಸಿದ್ಧಾಂತಗಳನ್ನು ಗ್ರಹಿಸಿಕೊಂಡು, ಭ್ರಷ್ಟ ಆಚರಣೆಯನ್ನು ತಮ್ಮದಾಗಿಸಿಕೊಂಡು ಜಗತ್ತಿನಲ್ಲಿ ವ್ಯವಹರಿಸುತ್ತಾರೆ. (16.10)
- ಹಾಗೆಯೇ ಅವರು ಆಮರಣಾಂತ ಅಸಂಖ್ಯ ಚಿಂತೆಗಳನ್ನು ಆಶ್ರಯಿಸಿ, ವಿಷಯಭೋಗಗಳನ್ನು ಭೋಗಿಸಲು ತತ್ಪರರಾಗಿ ‘ಸುಖವೆಂದರೆ ಇಷ್ಟೇ’ ಎಂದು ತಿಳಿದವರಾಗಿರುತ್ತಾರೆ. (16.11)
- ನೂರಾರು ಆಸೆಗಳ ಪಾಶಗಳಿಂದ ಬಂಧಿತರಾದ ಆ ಮನುಷ್ಯರು ಕಾಮ-ಕ್ರೋಧ ಪರಾಯಣರಾಗಿ ವಿಷಯ ಭೋಗಗಳಿಗಾಗಿ, ಅನ್ಯಾಯಪೂರ್ವಕ ಧನಾದಿ ಪದಾರ್ಥಗಳನ್ನು ಸಂಗ್ರಹಿಸುವ ಪ್ರಯತ್ನ ಮಾಡುತ್ತಾ ಇರುತ್ತಾರೆ. (16.12)
- ನಾನು ಇಂದು ಇದನ್ನು ಗಳಿಸಿದೆ ಹಾಗೂ ಇನ್ನು ಇಂತಹ ಮನೋರಥವನ್ನು ಪೂರ್ಣಗೊಳಿಸುವೆನು. ನನ್ನ ಬಳಿ ಇಷ್ಟು ಧನವಿದೆ ಮತ್ತು ಇನ್ನೂ ಧನಸಂಗ್ರಹವಾಗುವುದು ಎಂದು ಅವರು ಯೋಚಿಸುತ್ತಾರೆ. (16.13)
- ಈ ಶತ್ರುವನ್ನು ನಾನು ಕೊಂದೆ ಮತ್ತು ಆ ಇತರ ಶತ್ರುಗಳನ್ನೂ ನಾನು ಕೊಲ್ಲುವೆನು. ನಾನೇ ಈಶ್ವರನಾಗಿದ್ದೇನೆ, ಐಶ್ವರ್ಯವನ್ನು ಭೋಗಿಸುವವನಾಗಿದ್ದೇನೆ. ನಾನು ಎಲ್ಲ ಸಿದ್ಧಿಗಳಿಂದ ಕೂಡಿರುವೆನು ಮತ್ತು ಬಲಶಾಲಿಯೂ, ಸುಖಿಯೂ ಆಗಿದ್ದೇನೆ. (16.14)
- ನಾನು ದೊಡ್ಡ ಶ್ರೀಮಂತ ಮತ್ತು ದೊಡ್ಡ ಮನೆತನದಲ್ಲಿ ಹುಟ್ಟಿದವನು. ನನಗೆ ಸಮಾನರು ಬೇರೆ ಯಾರಿದ್ದಾರೆ? ನಾನು ಯಜ್ಞವನ್ನು ಮಾಡುವೆನು, ದಾನ ಕೊಡುವೆನು, ಆಮೋದ-ಪ್ರಮೋದ ಮಾಡುವೆನು. ಹೀಗೆ ಅಜ್ಞಾನದಿಂದ ಮೋಹಿತರಾಗಿ, ಅನೇಕ ಪ್ರಕಾರದಿಂದ ಭ್ರಮಿತ ಚಿತ್ತವುಳ್ಳವರು, ಮೋಹಜಾಲದಲ್ಲಿ ಸಿಕ್ಕಿಹಾಕಿಕೊಂಡು, ವಿಷಯ ಭೋಗಗಳಲ್ಲಿ ಅತ್ಯಂತ ಆಸಕ್ತರಾದ ಆಸುರೀ ಜನರು ಮಹಾ ಅಪವಿತ್ರ ನರಕದಲ್ಲಿ ಬೀಳುತ್ತಾರೆ. (16.15-16)
- ತಮ್ಮನ್ನೇ ಶ್ರೇಷ್ಠರೆಂದು ತಿಳಿದ ಅಹಂಕಾರೀ ಆ ಜನರು ಧನ ಮತ್ತು ಮಾನದ ಮದದಿಂದ ಉನ್ಮತ್ತರಾಗಿ, ಕೇವಲ ಹೆಸರಿಗಷ್ಟೇ ಯಜ್ಞಗಳ ಮೂಲಕ ದಂಭ (ಪಾಖಂಡತೆ)ದಿಂದ ಶಾಸ್ತ್ರವಿಧಿರಹಿತ ಯಜ್ಞ ಮಾಡುತ್ತಾರೆ. (16.17)
- ಅವರು ಅಹಂಕಾರ, ಬಲ, ದರ್ಪ, ಕಾಮನೆ ಮತ್ತು ಕ್ರೋಧಾದಿಗಳ ವಶರಾಗಿರುತ್ತಾರೆ. ಹಾಗೆಯೇ ಇತರರನ್ನು ನಿಂದಿಸುವ ಪುರುಷರು ತಮ್ಮ ಮತ್ತು ಬೇರೆಯವರ ಶರೀರದಲ್ಲಿ ಸ್ಥಿತನಾಗಿರುವ ಅಂತರ್ಯಾಮಿಯಾದ ನನ್ನನ್ನು ದ್ವೇಷಿಸುತ್ತಾರೆ. (16.18)
- ಆ ದ್ವೇಷಿಸುವ ಪಾಪೀ, ಕ್ರೂರಕರ್ಮಿಗಳೂ ಆದ ನರಾಧಮರನ್ನು ನಾನು ಸಂಸಾರದಲ್ಲಿ ಪದೇ-ಪದೇ ಆಸುರೀ ಯೋನಿಗಳಲ್ಲಿ ಹಾಕುತ್ತಾ ಇರುತ್ತೇನೆ. (16.19)
- ಎಲೈ ಅರ್ಜುನ! ಆ ಮೂಢರು ನನ್ನನ್ನು ಪಡೆಯದೆ ಜನ್ಮ-ಜನ್ಮಗಳಲ್ಲಿ ಆಸುರೀ ಯೋನಿಯನ್ನೇ ಪಡೆಯುತ್ತಾರೆ. ಬಳಿಕ ಅದಕ್ಕಿಂತಲೂ ಅತಿ ನೀಚ ಗತಿಯನ್ನೇ ಹೊಂದುತ್ತಾರೆ. ಅಂದರೆ ಘೋರವಾದ ನರಕದಲ್ಲಿ ಬೀಳುತ್ತಾರೆ. (16.20)
- ಕಾಮ, ಕ್ರೋಧ ಮತ್ತು ಲೋಭ ಇವು ಮೂರು ರೀತಿಯ ನರಕದ ಬಾಗಿಲುಗಳು. ಆತ್ಮನ ನಾಶಮಾಡುವ ಅರ್ಥಾತ್ ಅವನನ್ನು ಅಧೋಗತಿಗೆ ಕೊಂಡೊಯ್ಯುವಂತಹವುಗಳು. ಆದ್ದರಿಂದ ಆ ಮೂರನ್ನೂ ತ್ಯಜಿಸಬಿಡಬೇಕು. (16.21)
- ಎಲೈ ಅರ್ಜುನ! ಈ ಮೂರು ನರಕದ ದ್ವಾರಗಳಿಂದ ಮುಕ್ತನಾದ ಪುರುಷನು ತನ್ನ ಶ್ರೇಯಸ್ಸಿಗಾಗಿ ಆಚರಣೆ ಮಾಡುತ್ತಾನೆ. ಅದರಿಂದ ಅವನು ಪರಮಗತಿಯನ್ನು ಗಳಿಸುತ್ತಾನೆ. ಅರ್ಥಾತ್ ನನ್ನನ್ನೇ ಹೊಂದುತ್ತಾನೆ. (16.22)
- ಶಾಸ್ತ್ರವಿಧಿಯನ್ನು ಬಿಟ್ಟು ತನ್ನ ಮನಸ್ಸಿಗೆ ಬಂದಂತೆ ಆಚರಣೆ ಮಾಡುವವನು ಸಿದ್ಧಿಯನ್ನು ಪಡೆಯುವುದಿಲ್ಲ, ಪರಮಗತಿಯನ್ನೂ ಪಡೆಯುವುದಿಲ್ಲ ಹಾಗೂ ಸುಖವನ್ನೂ ಹೊಂದುವುದಿಲ್ಲ. (16.23)
- ಆದ್ದರಿಂದ ನಿನಗೆ ಕರ್ತವ್ಯ ಮತ್ತು ಅಕರ್ತವ್ಯದ ವ್ಯವಸ್ಥೆಯಲ್ಲಿ ಶಾಸ್ತ್ರವೇ ಪ್ರಮಾಣವಾಗಿದೆ. ಹೀಗೆ ತಿಳಿದು ನೀನು ಶಾಸ್ತ್ರವಿಧಿಯಿಂದ ನಿಯತ ಕರ್ಮವನ್ನೇ ಮಾಡಲು ಯೋಗ್ಯನಾಗಿರುವೆ. (16.24)
Chapter 17
- ಅರ್ಜುನನು ಹೇಳಿದನು – ಹೇ ಕೃಷ್ಣಾ! ಶಾಸ್ತ್ರವಿಧಿಯನ್ನು ಬಿಟ್ಟು ಶ್ರದ್ಧೆಯಿಂದ ಕೂಡಿದವರಾಗಿ ದೇವತೆಗಳ ಪೂಜೆ ಮಾಡುವ ಮನುಷ್ಯರ ಸ್ಥಿತಿಯು ಯಾವುದು? ಸಾತ್ವಿಕವೋ, ರಾಜಸವೋ ಅಥವಾ ತಾಮಸವೋ? (17.1)
- ಶ್ರೀಭಗವಂತನು ಹೇಳಿದನು – ಮನುಷ್ಯರ ಶಾಸ್ತ್ರೀಯ ಸಂಸ್ಕಾರರಹಿತವಾದ, ಕೇವಲ ಸ್ವಭಾವದಿಂದ ಉಂಟಾದ ಶ್ರದ್ಧೆಯು ಸಾತ್ತ್ವಿಕ, ರಾಜಸ ಹಾಗೂ ತಾಮಸ ಹೀಗೆ ಮೂರು ವಿಧದ್ದೇ ಆಗಿದೆ. ಅದನ್ನು ನೀನು ನನ್ನಿಂದ ಕೇಳು. (17.2)
- ಎಲೈ ಅರ್ಜುನ! ಎಲ್ಲ ಮನುಷ್ಯರ ಶ್ರದ್ಧೆಯು ಅವರವರ ಅಂತಃಕರಣಕ್ಕನು ರೂಪವಾಗಿ ಇರುತ್ತದೆ. ಈ ಪುರುಷನು ಶ್ರದ್ಧಾಮಯನಾಗಿದ್ದಾನೆ. ಆದ್ದರಿಂದ ಯಾವ ಮನುಷ್ಯನು ಎಂತಹ ಶ್ರದ್ಧೆಯುಳ್ಳವನೋ ಅವನು ಅದೇ ಆಗಿದ್ದಾನೆ. ಅರ್ಥಾತ್ ಆ ಶ್ರದ್ಧೆಗನುಸಾರವೇ ಅವನ ಸ್ವರೂಪ ಇರುತ್ತದೆ. (17.3)
- ಸಾತ್ತ್ವಿಕ ಜನರು ದೇವತೆಗಳನ್ನು ಪೂಜಿಸುತ್ತಾರೆ. ರಾಜಸ ಜನರು ಯಕ್ಷ-ರಾಕ್ಷಸರನ್ನು ಹಾಗೆಯೇ ಇತರ ತಾಮಸ ಜನರು ಪ್ರೇತ ಮತ್ತು ಭೂತಗಣಗಳನ್ನು ಪೂಜಿಸುತ್ತಾರೆ. (17.4)
- ಶಾಸ್ತ್ರವಿಧಿಯನ್ನು ಬಿಟ್ಟು ಕೇವಲ ಮನೋಕಲ್ಪಿತವಾದ ಘೋರ ತಪಸ್ಸನ್ನು ಆಚರಿಸುವ ಮನುಷ್ಯರು ದಂಭ, ಅಹಂಕಾರ, ಕಾಮನೆ, ಆಸಕ್ತಿಗಳಿಂದ ಕೂಡಿದವರಾಗಿ ಬಲದ ಅಭಿಮಾನದಿಂದಲೂ ಕೂಡಿಕೊಂಡಿದ್ದು – (17.5)
- ಶರೀರರೂಪದಿಂದ ಇರುವ ಪ್ರಾಣಿ ಸಮುದಾಯವನ್ನು ಮತ್ತು ಅಂತಃಕರಣದಲ್ಲಿ ಇರುವ ಪರಮಾತ್ಮನಾದ ನನ್ನನ್ನು ಕೃಶಗೊಳಿಸುವ ಅಜ್ಞಾನೀ ಜನರನ್ನು ಆಸುರೀ ಸ್ವಭಾವದವರೆಂದು ನೀನು ತಿಳಿ. (17.6)
- ಭೋಜನವೂ ಎಲ್ಲರಿಗೆ ತಮ್ಮ-ತಮ್ಮ ಪ್ರಕೃತಿಗೆ ಅನುಗುಣವಾಗಿ ಮೂರು ವಿಧವಾಗಿ ಪ್ರಿಯವಾಗಿರುತ್ತದೆ. ಹಾಗೆಯೇ ಯಜ್ಞ, ತಪಸ್ಸು ಮತ್ತು ದಾನವೂ ಕೂಡ ಮೂರು-ಮೂರು ಪ್ರಕಾರದಿಂದಿರುತ್ತವೆ. ಅವುಗಳ ಈ ಬೇರೆ-ಬೇರೆ ಭೇದಗಳನ್ನು ನೀನು ನನ್ನಿಂದ ಕೇಳು. (17.7)
- ಆಯುಸ್ಸು, ಬುದ್ಧಿ, ಬಲ, ಆರೋಗ್ಯ, ಸುಖ ಮತ್ತು ಪ್ರೀತಿಯನ್ನು ಹೆಚ್ಚಿಸುವ, ರಸಯುಕ್ತ, ಸ್ನೇಹಯುಕ್ತ, ಸ್ನಿಗ್ಧ, ಸ್ಥಿರವಾಗಿರುವ ಹಾಗೂ ಸ್ವಭಾವದಿಂದಲೇ ಮನಸ್ಸಿಗೆ ಪ್ರಿಯವಾದ ಭೋಜನ ಪದಾರ್ಥಗಳು ಸಾತ್ತ್ವಿಕ ಪುರುಷನಿಗೆ ಪ್ರಿಯವಾಗಿರುತ್ತವೆ. (17.8)
- ಕಹಿ, ಹುಳಿ, ಹೆಚ್ಚು ಉಪ್ಪಿನಿಂದ ಕೂಡಿದ, ಹೆಚ್ಚು ಬಿಸಿ, ಹೆಚ್ಚು ಖಾರ, ಹುರಿದಿರುವ, ಉರಿಯನ್ನುಂಟುಮಾಡುವ, ದುಃಖ, ಚಿಂತೆ ಹಾಗೂ ರೋಗಗಳನ್ನುಂಟು ಮಾಡುವ ಭೋಜನ ಪದಾರ್ಥಗಳು ರಾಜಸ ಜನರಿಗೆ ಪ್ರಿಯವಾಗಿರುತ್ತವೆ. (17.9)
- ಅರ್ಧಬೆಂದಿರುವ, ರಸರಹಿತವಾದ, ದುರ್ಗಂಧಯುಕ್ತವಾದ, ಹಳಸಿದ, ಎಂಜಲಾದ ಹಾಗೂ ಅಪವಿತ್ರವೂ ಆದ ಭೋಜನವು ತಾಮಸ ಜನರಿಗೆ ಪ್ರಿಯವಾಗಿರುತ್ತದೆ. (17.10)
- ಶಾಸ್ತ್ರವಿಧಿಯು ನೇಮಿಸಿದ ಯಜ್ಞ ಮಾಡುವುದು ಕರ್ತವ್ಯವಾಗಿದೆ ಎಂದು ಮನಸ್ಸಿನಲ್ಲಿ ನಿಶ್ಚಯಿಸಿ ಫಲೇಚ್ಛೆಯನ್ನು ಬಯಸದೆ ಮಾಡುವ ಯುಜ್ಞವು ಸಾತ್ತ್ವಿಕವಾಗಿದೆ. (17.11)
- ಆದರೆ ಎಲೈ ಅರ್ಜುನ! ಕೇವಲ ತೋರಿಕೆಗಾಗಿ ಅಥವಾ ಫಲವನ್ನೇ ದೃಷ್ಟಿಯಲ್ಲಿಟ್ಟುಕೊಂಡು ಮಾಡುವ ಯಜ್ಞವನ್ನು ನೀನು ರಾಜಸವೆಂದು ತಿಳಿ. (17.12)
- ಶಾಸ್ತ್ರವಿಧಿಯನ್ನು ಬಿಟ್ಟು, ಅನ್ನದಾನವಿಲ್ಲದ, ಮಂತ್ರಗಳಿಲ್ಲದ, ದಕ್ಷಿಣೆಕೊಡದೆ, ಅಶ್ರದ್ಧೆಯಿಂದ ಮಾಡುವ ಯಜ್ಞವನ್ನು ತಾಮಸ ಯಜ್ಞವೆಂದು ಹೇಳುತ್ತಾರೆ. (17.13)
- ದೇವತೆಗಳ, ಬ್ರಾಹ್ಮಣರ, ಗುರುಗಳ ಮತ್ತು ಜ್ಞಾನಿಗಳ ಪೂಜೆ ಮಾಡುವುದು, ಪವಿತ್ರತೆ, ಸರಳತೆ, ಬ್ರಹ್ಮಚರ್ಯ, ಅಹಿಂಸೆ, ಇವು ಶಾರೀರಿಕ ತಪಸ್ಸು ಎಂದು ಹೇಳಲಾಗುತ್ತದೆ. (17.14)
- ಉದ್ವೇಗಗೊಳಿಸದ, ಪ್ರಿಯವಾದ, ಹಿತಕರವಾದ ಮತ್ತು ಯಥಾರ್ಥವಾದ ಮಾತು, ಹಾಗೆಯೇ, ವೇದಶಾಸಗಳ ಅಧ್ಯಯನ, ಪರಮೇಶ್ವರನ ನಾಮ ಜಪದ ಅಭ್ಯಾಸ – ಇವನ್ನು ವಾಣಿಯ ತಪಸ್ಸೆಂದು ಹೇಳಲಾಗುತ್ತದೆ. (17.15)
- ಮನಸ್ಸಿನ ಪ್ರಸನ್ನತೆ, ಶಾಂತಭಾವ, ಭಗವಚ್ಚಿಂತನದ ಸ್ವಭಾವ, ಮನಸ್ಸಿನ ನಿಗ್ರಹ, ಅಂತಃಕರಣದ ಭಾವಗಳ ಪೂರ್ಣ ಪವಿತ್ರತೆ ಇವು ಮನಸ್ಸಿನ ತಪಸ್ಸೆಂದು ಹೇಳಲಾಗುತ್ತದೆ. (17.16)
- ಫಲದ ಇಚ್ಛೆ ಇಲ್ಲದ ಯೋಗೀ ಪುರುಷರು ಅತ್ಯಂತ ಶ್ರದ್ಧೆಯಿಂದ ಮಾಡುವ ಹಿಂದೆ ಹೇಳಿದ ಮೂರು ಪ್ರಕಾರದ (ಕಾಯಿಕ, ವಾಚಿಕ, ಮಾನಸಿಕ) ತಪಸ್ಸನ್ನು ಸಾತ್ತ್ಪಿಕವೆಂದು ಹೇಳುತ್ತಾರೆ. (17.17)
- ಸತ್ಕಾರ, ಮಾನ ಮತ್ತು ಪೂಜೆಗಾಗಿ ಹಾಗೆಯೇ ಬೇರೆ ಯಾವುದೋ ಸ್ವಾರ್ಥಕ್ಕಾಗಿ, ಸ್ವಭಾವದಿಂದಾಗಿ ಅಥವಾ ದಂಭಾಚಾರದಿಂದ ಮಾಡುವ ತಪಸ್ಸು, ಕ್ಷಣಿಕ ಹಾಗೂ ಅನಿಶ್ಚಿತ ಫಲವುಳ್ಳ ತಪಸ್ಸನ್ನು ಇಲ್ಲಿ ರಾಜಸವೆಂದು ಹೇಳಲಾಗಿದೆ. (17.18)
- ಮೂರ್ಖತೆಯಿಂದ, ಹಟದಿಂದ, ಮನಸ್ಸು, ವಾಣಿ, ಶರೀರಕ್ಕೆ ಕಷ್ಟಕೊಟ್ಟು ಅಥವಾ ಇತರರಿಗೆ ಅನಿಷ್ಟ ಮಾಡುವುದಕ್ಕಾಗಿ ಮಾಡಲಾಗುವ ತಪಸ್ಸನ್ನು ತಾಮಸವೆಂದು ಹೇಳಲಾಗಿದೆ. (17.19)
- ‘ದಾನ ಕೊಡುವುದೇ ಕರ್ತವ್ಯವಾಗಿದೆ’ ಈ ಭಾವದಿಂದ ದೇಶ, ಕಾಲ ಮತ್ತು ಪಾತ್ರ ದೊರಕಿದಾಗ ಪ್ರತ್ಯುಪಕಾರವನ್ನು ಬಯಸದೆ ಮಾಡುವ ದಾನವನ್ನು ಸಾತ್ತ್ವಿಕವೆಂದು ಹೇಳಲಾಗಿದೆ. (17.20)
- ಆದರೆ ಕ್ಲೇಶಪೂರ್ವಕ, ಪ್ರತ್ಯುಪಕಾರದ ಇಚ್ಛೆಯಿಂದ, ಅಥವಾ ಫಲವನ್ನು ದೃಷ್ಟಿಯಲ್ಲಿಟ್ಟು ಕೊಡಲಾಗುವ ದಾನವನ್ನು ರಾಜಸ ಎಂದು ಹೇಳಲಾಗಿದೆ. (17.21)
- ಸತ್ಕಾರವಿಲ್ಲದೆ, ಅಥವಾ ತಿರಸ್ಕಾರದಿಂದ ಅಯೋಗ್ಯ ದೇಶ-ಕಾಲಗಳಲ್ಲಿ ಮತ್ತು ಕುಪಾತ್ರನಿಗೆ ಕೊಡಲಾಗುವ ದಾನವನ್ನು ತಾಮಸವೆಂದು ಹೇಳಲಾಗಿದೆ. (17.22)
- ಓಂ, ತತ್, ಸತ್ – ಹೀಗೆ ಮೂರು ಪ್ರಕಾರದ ಹೆಸರುಗಳು ಓರ್ವ ಸಚ್ಚಿದಾನಂದಘನ ಬ್ರಹ್ಮನದ್ದೇ ಆಗಿವೆ. ಅವುಗಳಿಂದಲೇ ಸೃಷ್ಟಿಯ ಆದಿಯಲ್ಲಿ ಬ್ರಾಹ್ಮಣ, ವೇದ ಹಾಗೂ ಯಜ್ಞಾದಿಗಳು ರಚಿತವಾಗಿವೆ. (17.23)
- ಆದ್ದರಿಂದ ವೇದಮಂತ್ರಗಳನ್ನು ಉಚ್ಚರಿಸುವ ಶ್ರೇಷ್ಠ ಪುರುಷರ ಶಾಸ್ತ್ರಗಳು ಹೇಳಿದ ಯಜ್ಞ, ದಾನ ಮತ್ತು ತಪೋರೂಪೀ ಕ್ರಿಯೆಗಳನ್ನು ಯಾವಾಗಲೂ ‘ಓಂ’ ಎಂಬ ಈ ಪರಮಾತ್ಮನ ನಾಮವನ್ನು ಉಚ್ಚರಿಸಿಯೇ ಪ್ರಾರಂಭವಾಗುತ್ತವೆ. (17.24)
- ‘ತತ್’ ಈ ಹೆಸರಿನಿಂದ ಸಂಬೋಧಿಸುವ ಪರಮಾತ್ಮನದ್ದೇ ಇದೆಲ್ಲವೂ ಆಗಿದೆ. ಈ ಭಾವನೆಯಿಂದ ಫಲವನ್ನು, ಬಯಸದೆ ನಾನಾ ಪ್ರಕಾರದ ಯಜ್ಞ, ತಪಸ್ಸು ಮತ್ತು ದಾನರೂಪೀ ಕ್ರಿಯೆಗಳನ್ನು ಶ್ರೇಯಸ್ಸಿನ ಇಚ್ಛೆಯುಳ್ಳ ಪುರುಷರು ಮಾಡುತ್ತಾರೆ. (17.25)
- ‘ಸತ್’ಈ ಪರಮಾತ್ಮನ ಹೆಸರನ್ನು ಸತ್ಯಭಾವದಲ್ಲಿ ಮತ್ತು ಶ್ರೇಷ್ಠಭಾವದಲ್ಲಿ ಪ್ರಯೋಗಿಸಲಾಗುತ್ತದೆ. ಹಾಗೆಯೇ ಪಾರ್ಥನೇ! ಉತ್ತಮವಾದ ಕರ್ಮದಲ್ಲಿಯೂ ‘ಸತ್‘ ಶಬ್ದವನ್ನು ಪ್ರಯೋಗಿಸಲಾಗುತ್ತದೆ. (17.26)
- ಹಾಗೆಯೇ ಯಜ್ಞ, ತಪಸ್ಸು ಮತ್ತು ದಾನದಲ್ಲಿ ಇರುವ ಸ್ಥಿತಿಯನ್ನೂ, ಕೂಡ ‘ಸತ್’ ಎಂದು ಹೇಳಲಾಗುತ್ತದೆ ಮತ್ತು ಪರಮಾತ್ಮನಿಗಾಗಿ ಮಾಡಿದ ಕರ್ಮವು ನಿಶ್ಚಯವಾಗಿ ‘ಸತ್’ ಎಂದು ಹೇಳಲಾಗುತ್ತದೆ. (17.27)
- ಎಲೈ ಅರ್ಜುನ! ಶ್ರದ್ಧೆಯಿಲ್ಲದೆ ಮಾಡಿದ ಹವನ, ಕೊಟ್ಟ ದಾನ, ಮಾಡಿದ ತಪಸ್ಸು ಮತ್ತು ಮಾಡಿದ ಶುಭಕರ್ಮಗಳೆಲ್ಲವೂ ‘ಅಸತ್’ ಎಂದು ಹೇಳಲಾಗುತ್ತದೆ. ಆದ್ದರಿಂದ ಅದು ಈ ಲೋಕದಲ್ಲಾಗಲೀ, ಪರಲೋಕದಲ್ಲಾಗಲೀ ಲಾಭದಾಯಕವಾಗುವುದಿಲ್ಲ. (17.28)
Chapter 18
- ಅರ್ಜುನ ಕೇಳಿದನು – ಹೇ ಮಹಾಬಾಹೋ! ಹೇ ಅಂತರ್ಯಾಮಿ! ಹೇ ವಾಸುದೇವಾ! ನಾನು ಸಂನ್ಯಾಸ ಮತ್ತು ತ್ಯಾಗದ ತತ್ತ್ವವನ್ನು ಬೇರೆ-ಬೇರೆಯಾಗಿ ತಿಳಿಯಲು ಬಯಸುತ್ತೇನೆ. (18.1)
- ಶ್ರೀಭಗವಂತನು ಹೇಳಿದನು – ಎಷ್ಟೋ ಪಂಡಿತರು ಕಾಮ್ಯಕರ್ಮಗಳ ತ್ಯಾಗವನ್ನು ಸಂನ್ಯಾಸವೆಂದು ತಿಳಿಯುತ್ತಾರೆ ಹಾಗೂ ಇತರ ವಿಚಾರಶೀಲರಾದ ಜನರು ಎಲ್ಲ ಕರ್ಮಗಳ ಫಲತ್ಯಾಗವನ್ನು ತ್ಯಾಗವೆಂದು ಹೇಳುತ್ತಾರೆ. (18.2)
- ಎಲ್ಲಾ ಕರ್ಮಗಳು ದೋಷಯುಕ್ತವಾಗಿವೆ ಆದ್ದರಿಂದ ತ್ಯಜಿಸಲು ಯೋಗ್ಯವಾಗಿವೆ ಎಂದು ಕೆಲವು ವಿದ್ವಾಂಸರು ಹೇಳುತ್ತಾರೆ ಹಾಗೂ ಯಜ್ಞ, ದಾನ ಮತ್ತು ತಪಸ್ಸುರೂಪವಾದ ಕರ್ಮಗಳು ತ್ಯಜಿಸಲು ಯೋಗ್ಯವಲ್ಲ ಎಂದು ಇತರ ವಿದ್ವಾಂಸರು ಹೇಳುತ್ತಾರೆ. (18.3)
- ಎಲೈ ಪುರುಷಶ್ರೇಷ್ಠ ಅರ್ಜುನ! ಸಂನ್ಯಾಸ ಮತ್ತು ತ್ಯಾಗ ಇವೆರಡರಲ್ಲಿ ಮೊದಲು ತ್ಯಾಗದ ವಿಷಯದಲ್ಲಿ ನನ್ನ ನಿಶ್ಚಯವನ್ನು ಕೇಳು, ಏಕೆಂದರೆ ತ್ಯಾಗವು ಸಾತ್ತ್ವಿಕ, ರಾಜಸ ಹಾಗೂ ತಾಮಸ ಎಂಬ ಭೇದದಿಂದ ಮೂರು ಪ್ರಕಾರದ್ದೆಂದು ಹೇಳಲಾಗಿದೆ. (18.4)
- ಯಜ್ಞ, ದಾನ ಮತ್ತು ತಪಸ್ಸುರೂಪೀ ಕರ್ಮ ತ್ಯಜಿಸುವುದು ಯೋಗ್ಯವಲ್ಲ. ಅಲ್ಲದೆ ಅದು ಅವಶ್ಯವಾದ ಕರ್ತವ್ಯವಾಗಿದೆ, ಏಕೆಂದರೆ ಯಜ್ಞ, ದಾನ, ತಪಸ್ಸು ಈ ಮೂರು ಕರ್ಮಗಳೇ ಬುದ್ಧಿವಂತರಾದ ಮನುಷ್ಯರನ್ನು ಪವಿತ್ರಗೊಳಿಸುವುದಾಗಿದೆ. (18.5)
- ಆದ್ದರಿಂದ ಎಲೈ ಪಾರ್ಥಾ! ಈ ಯಜ್ಞ, ದಾನ, ತಪೋರೂಪೀ ಕರ್ಮಗಳನ್ನು ಹಾಗೂ ಇತರ ಸಮಸ್ತ ಕರ್ತವ್ಯ ಕರ್ಮಗಳನ್ನು ಆಸಕ್ತಿ ಮತ್ತು ಫಲಗಳನ್ನು ತ್ಯಜಿಸಿ ಅವಶ್ಯವಾಗಿ ಮಾಡಬೇಕು. ಇದು ನನ್ನ ನಿಶ್ಚಿತವಾದ ಉತ್ತಮ ಅಭಿಪ್ರಾಯವಾಗಿದೆ. (18.6)
- (ನಿಷಿದ್ಧ ಮತ್ತು ಕಾಮ್ಯ ಕರ್ಮಗಳನ್ನಾದರೋ ಸ್ವರೂಪದಿಂದ ತ್ಯಾಗ ಮಾಡುವುದು ಉಚಿತವೇ ಆಗಿದೆ.) ಆದರೆ ನಿಯತ ಕರ್ಮವನ್ನು ಸ್ವರೂಪದಿಂದ ತ್ಯಜಿಸುವುದು ಯೋಗ್ಯವಲ್ಲ. ಅದಕ್ಕಾಗಿ ಮೋಹದಿಂದ ಅದನ್ನು ತ್ಯಜಿಸುವುದು ತಾಮಸ ತ್ಯಾಗವೆಂದು ಹೇಳಲಾಗಿದೆ. (18.7)
- ಇರುವುದೆಲ್ಲ ಕರ್ಮಗಳು ದುಃಖರೂಪವಾಗಿವೆ ಎಂದು ತಿಳಿದು ಶಾರೀರಿಕ ಕ್ಲೇಶದ ಭಯದಿಂದ ಕರ್ತವ್ಯ ಕರ್ಮಗಳನ್ನು ತ್ಯಾಗ ಮಾಡಿದರೆ, ಇಂತಹ ರಾಜಸ ತ್ಯಾಗವನ್ನು ಮಾಡಿದ ಅವನಿಗೆ ತ್ಯಾಗದ ಫಲವು ಯಾವ ರೀತಿಯಿಂದಲೂ ಸಿಗುವುದಿಲ್ಲ. (18.8)
- ಎಲೈ ಅರ್ಜುನ! ‘ಶಾಸವಿಹಿತ ಕರ್ಮ ಮಾಡುವುದು ಕರ್ತವ್ಯವಾಗಿದೆ’ ಎಂಬ ಭಾವನೆಯಿಂದ ಆಸಕ್ತಿ ಮತ್ತು ಫಲವನ್ನು ತ್ಯಾಗಮಾಡಿ ಮಾಡುವ ತ್ಯಾಗವೇ ಸಾತ್ವಿಕ ತ್ಯಾಗವೆಂದು ತಿಳಿಯಲಾಗಿದೆ. (18.9)
- ಕುಶಲವಲ್ಲದ ಕರ್ಮವನ್ನು ದ್ವೇಷಿಸದೆ, ಕುಶಲಕರ್ಮದಲ್ಲಿ ಆಸಕ್ತನಾಗದೆ, ಶುದ್ಧವಾದ ಸತ್ತ್ವಗುಣದಿಂದ ಕೂಡಿದ ಪುರುಷನು ಸಂಶಯರಹಿತ, ಬುದ್ಧಿವಂತ ಮತ್ತು ನಿಜವಾದ ತ್ಯಾಗಿಯೂ ಆಗಿದ್ದಾನೆ. (18.10)
- ಏಕೆಂದರೆ ಶರೀರಧಾರೀಯಾದ ಯಾವದೇ ಮನುಷ್ಯನು ಪೂರ್ಣವಾಗಿ ಕರ್ಮಗಳೆಲ್ಲವನ್ನು ತ್ಯಜಿಸುವುದು ಸಾಧ್ಯವಾಗದು. ಆದ್ದರಿಂದ ಕರ್ಮಫಲ ತ್ಯಾಗಿಯಾಗಿರುವವನೇ ತ್ಯಾಗಿಯಾಗಿದ್ದಾನೆ ಎಂದು ಹೇಳಲಾಗುತ್ತದೆ. (18.11)
- ಕರ್ಮಫಲವನ್ನು ತ್ಯಾಗ ಮಾಡದಿರುವ ಮನುಷ್ಯನಿಗೆ ಕರ್ಮದ ಒಳ್ಳೆಯ, ಕೆಟ್ಟ ಮತ್ತು ಮಿಶ್ರ ಎಂಬ ಮೂರು ವಿಧದ ಫಲಗಳು ಸತ್ತ ಬಳಿಕ ಅವಶ್ಯವಾಗಿ ಸಿಗುತ್ತವೆ, ಆದರೆ ಕರ್ಮಫಲವನ್ನು ತ್ಯಾಗಮಾಡಿದ ಮನುಷ್ಯರಿಗೆ ಕರ್ಮಗಳ ಫಲಗಳು ಎಂದಿಗೂ ಸಿಗಲಾರವು. (18.12)
- ಎಲೈ ಮಹಾಬಾಹೋ! ಸಂಪೂರ್ಣ ಕರ್ಮಗಳ ಸಿದ್ಧಿಗೆ ಈ ಐದು ಕಾರಣಗಳನ್ನು, ಕರ್ಮಗಳನ್ನು ಮುಗಿಸಲು ಉಪಾಯವನ್ನು ತಿಳಿಸುವ ಸಾಂಖ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಅವುಗಳನ್ನು ನೀನು ನನ್ನಿಂದ ಚೆನ್ನಾಗಿ ತಿಳಿದುಕೋ. (18.13)
- ಕರ್ಮಗಳ ಸಿದ್ಧಿಗಾಗಿ ಅಧಿಷ್ಠಾನ, ಕರ್ತಾ, ಭಿನ್ನ-ಭಿನ್ನ ಪ್ರಕಾರದ ಕರಣಗಳು, ಅನೇಕ ವಿಧದ ಬೇರೆ-ಬೇರೆ ಕ್ರಿಯೆಗಳು ಮತ್ತು ಹಾಗೆಯೇ ಐದನೆಯ ಕಾರಣ ದೈವವಾಗಿದೆ. (18.14)
- ಮನುಷ್ಯನು ಮನಸ್ಸು, ವಾಣಿ ಮತ್ತು ಶರೀರದಿಂದ ಶಾಸ್ತ್ರಾನುಕೂಲವಾಗಲೀ ಅಥವಾ ಅದಕ್ಕೆ ವಿರುದ್ಧವಾಗಲೀ ಯಾವುದೇ ಕರ್ಮಮಾಡಲು ಈ ಐದೇ ಕಾರಣಗಳಿರುತ್ತವೆ. (18.15)
- ಆದರೆ ಹೀಗಿದ್ದರೂ ಯಾವ ಮನುಷ್ಯನು ಅಶುದ್ಧ ಬುದ್ಧಿಯಿಂದಾಗಿ ಕರ್ಮಗಳು ಪೂರ್ಣವಾಗುವುದರಲ್ಲಿ ಕೇವಲ ಮತ್ತು ಶುದ್ಧ ಸ್ವರೂಪೀ ಆತ್ಮನನ್ನು ಕರ್ತಾ ಎಂದು ತಿಳಿಯುತ್ತಾನೋ, ಆ ಮಲಿನ ಬುದ್ಧಿಯ ಅಜ್ಞಾನಿಯು ಯಥಾರ್ಥವನ್ನು ತಿಳಿಯುವುದಿಲ್ಲ. (18.16)
- ಯಾವ ಪುರುಷನ ಅಂತಃಕರಣದಲ್ಲಿ ‘ನಾನು ಕರ್ತಾ ಆಗಿದ್ದೇನೆ’ ಎಂಬ ಭಾವ ಇರುವುದಿಲ್ಲವೋ, ಹಾಗೆಯೇ ಯಾರ ಬುದ್ಧಿಯು ಸಾಂಸಾರಿಕ ಪದಾರ್ಥಗಳಲ್ಲಿ ಮತ್ತು ಕರ್ಮಗಳಲ್ಲಿ ಅಂಟಿಕೊಳ್ಳುವುದಿಲ್ಲವೋ, ಆ ಮನುಷ್ಯನು ಎಲ್ಲ ಜನರನ್ನು ಕೊಂದರೂ ವಾಸ್ತವಿಕವಾಗಿ ಕೊಲ್ಲುವುದಿಲ್ಲ ಹಾಗೂ ಅವನು ಪಾಪದಿಂದ ಬಂಧಿತನಾಗುವುದೂ ಇಲ್ಲ. (18.17)
- ಜ್ಞಾತಾ, ಜ್ಞಾನ ಮತ್ತು ಜ್ಞೇಯ ಇವು ಮೂರು ವಿಧದ ಕರ್ಮ ಪ್ರೇರಣೆಯಾಗಿದೆ ಮತ್ತು ಕರ್ತಾ, ಕರಣ ಹಾಗೂ ಕ್ರಿಯೆ ಇವು ಮೂರು ಪ್ರಕಾರದ ಕರ್ಮಸಂಗ್ರಹವಾಗಿದೆ. (18.18)
- ಗುಣಗಳ ಸಂಖ್ಯೆಯನ್ನು ತಿಳಿಸುವ ಶಾಸ್ತ್ರದಲ್ಲಿ ಜ್ಞಾನ, ಕರ್ಮ ಮತ್ತು ಕರ್ತಾ ಇವು ಗುಣಗಳ ಭೇದದಿಂದ ಮೂರು- ಮೂರು ಪ್ರಕಾರದಿಂದಲೇ ಹೇಳಲಾಗಿದೆ. ಅದನ್ನೂ ನೀನು ನನ್ನಿಂದ ಚೆನ್ನಾಗಿ ಕೇಳು. (18.19)
- ಯಾವ ಜ್ಞಾನದಿಂದ ಮನುಷ್ಯನು ಬೇರೆ-ಬೇರೆಯಾದ ಎಲ್ಲ ಪ್ರಾಣಿಗಳಲ್ಲಿ ಒಂದೇ ಅವಿನಾಶಿಯಾದ ಪರಮಾತ್ಮ ಭಾವವನ್ನು ವಿಭಾಗರಹಿತ ಸಮಭಾವದಿಂದ ಸ್ಥಿತನಾಗಿದ್ದಾನೆ ಎಂದು ನೋಡುವ ಜ್ಞಾನವನ್ನು ನೀನು ಸಾತ್ತ್ವಿಕವೆಂದು ತಿಳಿ. (18.20)
- ಆದರೆ ಯಾವ ಜ್ಞಾನದಿಂದ ಮನುಷ್ಯನು ಸಮಸ್ತ ಭೂತಗಳಲ್ಲಿ ಭಿನ್ನ-ಭಿನ್ನ ಪ್ರಕಾರಗಳ ಅನೇಕ ಭಾವಗಳನ್ನು ಬೇರೆ-ಬೇರೆಯಾಗಿ ತಿಳಿಯುವನೋ, ಆ ಜ್ಞಾನವನ್ನು ನೀನು ರಾಜಸವೆಂದು ತಿಳಿ. (18.21)
- ಆದರೆ ಒಂದು ಕಾರ್ಯರೂಪೀ ಶರೀರದಲ್ಲೇ ಪೂರ್ಣದಂತೆ ಆಸಕ್ತವಾಗಿದೆಯೋ, ಹಾಗೆಯೇ ಯುಕ್ತಿಶೂನ್ಯ, ತಾತ್ತ್ವಿಕ ಅರ್ಥರಹಿತ ಮತ್ತು ತುಚ್ಛವಾಗಿರುವ ಜ್ಞಾನವನ್ನು ತಾಮಸವೆಂದು ಹೇಳಲಾಗಿದೆ. (18.22)
- ಶಾಸ್ತ್ರವಿಧಿಯಿಂದ ನಿಯಮಿಸಿದ ಕರ್ಮವನ್ನು ಕರ್ತೃತ್ವದ ಅಭಿಮಾನದಿಂದ ರಹಿತವಾಗಿ, ಫಲವನ್ನು ಬಯಸದೆ ಇರುವ ಮನುಷ್ಯನು ರಾಗ-ದ್ವೇಷ ರಹಿತವಾಗಿ ಮಾಡುವನೋ ಆ ಕರ್ಮವನ್ನು ಸಾತ್ತ್ವಿಕವೆಂದು ಹೇಳಲಾಗಿದೆ. (18.23)
- ಆದರೆ ಬಹಳ ಪರಿಶ್ರಮಪೂರ್ವಕ ಹಾಗೂ ಭೋಗಗಳನ್ನು ಬಯಸುವ ಅಥವಾ ಅಹಂಕಾರದಿಂದ ಕೂಡಿದ ಮನುಷ್ಯನು ಮಾಡಿದ ಕರ್ಮವನ್ನು ರಾಜಸವೆಂದು ಹೇಳಲಾಗಿದೆ. (18.24)
- ಪರಿಣಾಮ, ಹಾನಿ, ಹಿಂಸೆ ಮತ್ತು ಸಾಮರ್ಥ್ಯ ಇವುಗಳ ವಿಚಾರ ಮಾಡದೆ, ಕೇವಲ ಅಜ್ಞಾನದಿಂದ ಮಾಡುವ ಕರ್ಮವನ್ನು ತಾಮಸವೆಂದು ಹೇಳಲಾಗುತ್ತದೆ. (18.25)
- ಸಂಗರಹಿತನಾಗಿ, ಅಹಂಕಾರದ ಮಾತನ್ನು ಆಡದೆ, ಧೈರ್ಯ, ಉತ್ಸಾಹದಿಂದ ಹಾಗೂ ಕಾರ್ಯವು ಸಿದ್ಧವಾಗಲೀ, ಆಗದಿರಲೀ ಅದರಲ್ಲಿ ಹರ್ಷ-ಶೋಕಾದಿ ವಿಕಾರಗಳಿಂದ ರಹಿತನಾದ ಕರ್ತನನ್ನು ಸಾತ್ತ್ವಿಕನೆಂದು ಹೇಳಲಾಗುತ್ತದೆ. (18.26)
- ಆಸಕ್ತಿಯಿಂದ ಕೂಡಿದವನಾಗಿ, ಕರ್ಮಗಳ ಫಲಗಳನ್ನು ಬಯಸುತ್ತಾ, ಲೋಭಿ, ಇತರರಿಗೆ ಕಷ್ಟಕೊಡುವ ಸ್ವಭಾವವುಳ್ಳ, ಅಶುದ್ಧ ಆಚರಣೆಯುಳ್ಳ ಮತ್ತು ಹರ್ಷ-ಶೋಕಗಳಿಂದ ಕೂಡಿದ ಕರ್ತನನ್ನು ರಾಜಸನೆಂದು ಹೇಳುತ್ತಾರೆ. (18.27)
- ಅಯುಕ್ತನೂ, ಶಿಕ್ಷಣರಹಿತನೂ, ಅಹಂಕಾರಿಯೂ, ಧೂರ್ತನೂ ಮತ್ತು ಇತರರ ಜೀವನವನ್ನು ನಾಶಪಡಿಸುವವನೂ, ಶೋಕಿಸುವವನೂ, ಸೋಮಾರಿಯೂ, ದೀರ್ಘಸೂತ್ರಿಯೂ ಆದ ಕರ್ತೃನನ್ನು ತಾಮಸನೆಂದು ಹೇಳಲಾಗುತ್ತದೆ. (18.28)
- ಎಲೈ ಧನಂಜಯ! ಇನ್ನು ಬುದ್ಧಿಯ ಮತ್ತು ಧೃತಿಯ ಗುಣಗಳಿಗನುಸಾರ ಮೂರು ಪ್ರಕಾರದ ಭೇದಗಳನ್ನು, ಪೂರ್ಣವಾಗಿ, ವಿಭಾಗಪೂರ್ವಕ ನಾನು ಹೇಳುವೆನು, ಅದನ್ನು ನೀನು ಕೇಳು. (18.29)
- ಎಲೈ ಪಾರ್ಥ! ಪ್ರವೃತ್ತಿಮಾರ್ಗ ಮತ್ತು ನಿವೃತ್ತಿಮಾರ್ಗ, ಕರ್ತವ್ಯ ಹಾಗೂ ಅಕರ್ತವ್ಯ, ಭಯ ಮತ್ತು ಅಭಯ ಹಾಗೆಯೇ ಬಂಧನ ಹಾಗೂ ಮೋಕ್ಷ ಇವನ್ನು ಯಥಾರ್ಥವಾಗಿ ತಿಳಿಯುವ ಬುದ್ಧಿಯು ಸಾತ್ತ್ವಿಕವಾಗಿದೆ. (18.30)
- ಎಲೈ ಪಾರ್ಥಾ! ಧರ್ಮವನ್ನು ಮತ್ತು ಅಧರ್ಮವನ್ನು, ಕರ್ತವ್ಯ ಹಾಗೂ ಅಕರ್ತವ್ಯವನ್ನು ಯಥಾರ್ಥವಾಗಿ ತಿಳಿಯುವ ಮನುಷ್ಯನ ಬುದ್ಧಿಯು ರಾಜಸವಾಗಿದೆ. (18.31)
- ಎಲೈ ಅರ್ಜುನಾ! ತಮೋಗುಣದಿಂದ ವ್ಯಾಪಿಸಿದ ಬುದ್ಧಿಯು ಅಧರ್ಮವನ್ನೂ ಕೂಡ ‘ಇದು ಧರ್ಮವಾಗಿದೆ’ ಎಂದು ತಿಳಿಯುತ್ತದೆ, ಹಾಗೆಯೇ ಇತರ ಪದಾರ್ಥಗಳನ್ನೂ ವಿಪರೀತವಾಗಿ ತಿಳಿಯುವ ಬುದ್ಧಿಯು ತಾಮಸಿಯಾಗಿದೆ. (18.32)
- ಎಲೈ ಪಾರ್ಥನೆ! ಯಾವ ಅವ್ಯಭಿಚಾರಿಣಿಯಾದ ಧಾರಣ ಶಕ್ತಿಯಿಂದ ಮನುಷ್ಯನು ಧ್ಯಾನಯೋಗದಿಂದ ಮನಸ್ಸು, ಪ್ರಾಣ ಮತ್ತು ಇಂದ್ರಿಯಗಳ ಕ್ರಿಯೆಗಳನ್ನು ಧಾರಣೆ ಮಾಡುತ್ತಾನೋ, ಆ ಧೃತಿಯು ಸಾತ್ತ್ವಿಕವಾಗಿದೆ. (18.33)
- ಆದರೆ ಕುಂತೀಪುತ್ರ ಅರ್ಜುನನೇ! ಫಲದ ಇಚ್ಛೆಯುಳ್ಳ ಮನುಷ್ಯನು ಅತಿ ಆಸಕ್ತಿಯಿಂದಾಗಿ ಯಾವ ಧಾರಣಶಕ್ತಿಯಿಂದ ಧರ್ಮ, ಅರ್ಥ ಮತ್ತು ಕಾಮ ಇವನ್ನು ಧರಣೆ ಮಾಡುತ್ತಾನೋ ಆ ಧಾರಣಶಕ್ತಿಯು ರಾಜಸವಾಗಿದೆ. (18.34)
- ಎಲೈ ಪಾರ್ಥನೇ! ದುಷ್ಟಬುದ್ಧಿಯುಳ್ಳ ಮನುಷ್ಯನು ಯಾವ ಧಾರಣ ಶಕ್ತಿಯಿಂದ ನಿದ್ದೆ, ಭಯ, ಚಿಂತೆ, ದುಃಖ ಮತ್ತು ಉನ್ಮತ್ತತೆಯನ್ನೂ ಬಿಡುವುದಿಲ್ಲವೋ ಅರ್ಥಾತ್ ಧರಿಸಿಕೊಂಡಿರುವನೋ, ಆ ಧಾರಣಶಕ್ತಿಯು ತಾಮಸಿಯಾಗಿದೆ. (18.35)
- ಎಲೈ ಭರತಶ್ರೇಷ್ಠಾ! ಈಗ ಮೂರು ಪ್ರಕಾರದ ಸುಖವನ್ನು ಕೂಡ ನನ್ನಿಂದ ನೀನು ಕೇಳು. ಯಾವ ಸುಖದಲ್ಲಿ ಸಾಧಕನು ಭಜನೆ, ಧ್ಯಾನ ಮತ್ತು ಸೇವೆ ಮೊದಲಾದ ಅಭ್ಯಾಸದಲ್ಲಿ ರಮಿಸುತ್ತಾನೋ ಮತ್ತು ಯಾವುದರಿಂದ ಅವನ ದುಃಖ ಇಲ್ಲವಾಗುತ್ತದೋ, ಇದು ಪ್ರಾರಂಭದಲ್ಲಿ ವಿಷದಂತೆ ಕಂಡರೂ ಪರಿಣಾಮದಲ್ಲಿ ಅಮೃತಕ್ಕೆ ಸಮಾನವಾಗಿರುತ್ತದೆ. ಅದು ಪರಮಾತ್ಮನ ವಿಷಯಕ ಬುದ್ಧಿಯ ಪ್ರಸಾದದಿಂದ ಉಂಟಾಗುತ್ತದೆ. ಆ ಸುಖವನ್ನು ಸಾತ್ತ್ವಿಕ ಸುಖವೆಂದು ಹೇಳಲಾಗಿದೆ. (18.36-37)
- ವಿಷಯ ಮತ್ತು ಇಂದ್ರಿಯಗಳ ಸಂಯೋಗದಿಂದ ಉಂಟಾಗುವ ಸುಖವು ಮೊದಲು ಭೋಗಕಾಲದಲ್ಲಿ ಅಮೃತಕ್ಕೆ ಸಮವಾಗಿ ತೋರಿದರೂ ಪರಿಣಾಮದಲ್ಲಿ ವಿಷಕ್ಕೆ ಸಮಾನವಾಗಿದೆ. ಆದ್ದರಿಂದ ಆ ಸುಖವನ್ನು ರಾಜಸವೆಂದು ಹೇಳುತ್ತಾರೆ. (18.38)
- ಭೋಗಕಾಲದಲ್ಲಿ ಹಾಗೂ ಪರಿಣಾಮದಲ್ಲಿಯೂ ಆತ್ಮನನ್ನು ಮೋಹಗೊಳಿಸುತ್ತದೋ, ನಿದ್ದೆ, ಆಲಸ್ಯ ಮತ್ತು ಪ್ರಮಾದದಿಂದ ಉತ್ಪನ್ನವಾಗುತ್ತದೋ, ಆ ಸುಖವನ್ನು ತಾಮಸವೆಂದು ಹೇಳಲಾಗಿದೆ. (18.39)
- ಪೃಥಿವಿಯಲ್ಲಿ, ಆಕಾಶದಲ್ಲಿ ಅಥವಾ ದೇವತೆಗಳಲ್ಲಿ ಹಾಗೆಯೇ ಇವಲ್ಲದೆ ಮತ್ತೆ ಎಲ್ಲೇ ಆಗಿರಲಿ ಪ್ರಕೃತಿಯಿಂದ ಉತ್ಪನ್ನವಾದ ಯಾವುದೇ ಪ್ರಾಣಿ ಇಲ್ಲವೇ ಪದಾರ್ಥಗಳು ಮೂರು ಗುಣಗಳಿಂದ ರಹಿತವಾದಸತ್ತ್ವವು ಯಾವುದೂ ಇಲ್ಲ. (18.40)
- ಎಲೈ ಪರಂತಪನೇ! ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಇವರ ಕರ್ಮಗಳು ಸ್ವಭಾವತಃ ಉತ್ಪನ್ನವಾದ ಗುಣಗಳಿಂದಾಗಿ ವಿಭಾಗಿಸಲಾಗಿದೆ. (18.41)
- ಅಂತಃಕರಣದ ನಿಗ್ರಹ, ಇಂದ್ರಿಯಗಳ ಮೇಲೆ ಹತೋಟಿ, ಧರ್ಮಪಾಲನೆಗಾಗಿ ಕಷ್ಟ ಸಹಿಸುವುದು, ಒಳ ಹೊರಗೆ ಶುದ್ಧವಾಗಿರುವುದು, ಬೇರೆಯವರ ಅಪರಾಧಗಳನ್ನು ಕ್ಷಮಿಸುವುದು, ಮನಸ್ಸು, ಇಂದ್ರಿಯಗಳು ಮತ್ತು ಶರೀರವನ್ನು ಸರಳವಾಗಿರುವುದು, ವೇದ, ಶಾಸ್ತ್ರ, ದೇವರು ಮತ್ತು ಪರಲೋಕಾದಿಗಳಲ್ಲಿ ಶ್ರದ್ಧೆಯನ್ನಿಡುವುದು, ವೇದಶಾಸ್ತ್ರಗಳ ಅಧ್ಯಯನ ಮತ್ತು ಅಧ್ಯಾಪನ ಮಾಡುವುದು, ಪರಮಾತ್ಮ ತತ್ತ್ವದ ಅನುಭವ ಪಡೆಯುವುದು – ಇವೆಲ್ಲವೂ ಬ್ರಾಹ್ಮಣನ ಸ್ವಾಭಾವಿಕವಾದ ಕರ್ಮಗಳಾಗಿವೆ. (18.42)
- ಶೌರ್ಯ, ತೇಜ, ಧೈರ್ಯ, ಚಾತುರ್ಯ, ಯುದ್ಧದಿಂದ ಓಡಿ ಹೋಗದಿರುವುದು, ದಾನ ಕೊಡುವುದು ಮತ್ತು ಸ್ವಾಮಿಭಾವ ಇವೆಲ್ಲವೂ ಕ್ಷತ್ರಿಯನ ಸ್ವಾಭಾವಿಕ ಕರ್ಮಗಳಾಗಿವೆ. (18.43)
- ಕೃಷಿ, ಗೋಪಾಲನೆ ಮತ್ತು ಕ್ರಯ-ವಿಕ್ರಯರೂಪೀ ಸತ್ಯ ವ್ಯವಹಾರ – ಇವು ವೈಶ್ಯರ ಸ್ವಾಭಾವಿಕ ಕರ್ಮಗಳಾಗಿವೆ. ಹಾಗೆಯೇ ಸರ್ವ ವರ್ಣಗಳ ಸೇವೆ ಮಾಡುವುದು ಶೂದ್ರನ ಸ್ವಾಭಾವಿಕ ಕರ್ಮವಾಗಿದೆ. (18.44)
- ತಮ್ಮ-ತಮ್ಮ ಸ್ವಾಭಾವಿಕ ಕರ್ಮಗಳಲ್ಲಿ ತತ್ಪರತೆಯಿಂದ ತೊಡಗಿರುವ ಮನುಷ್ಯನಿಗೆ ಭಗವತ್ ಪ್ರಾಪ್ತಿರೂಪೀ ಪರಮ ಸಿದ್ಧಿಯ ಲಾಭವಾಗುತ್ತದೆ. ತನ್ನ ಸ್ವಾಭಾವಿಕ ಕರ್ಮದಲ್ಲಿ ರತನಾದ ಮನುಷ್ಯನು ಹೇಗೆ ಕರ್ಮಮಾಡಿ ಪರಮ ಸಿದ್ಧಿಯನ್ನು ಪಡೆಯುತ್ತಾನೆ? ಆ ವಿಧಿಯನ್ನು ನೀನು ಕೇಳು. (18.45)
- ಯಾವ ಪರಮೇಶ್ವರನಿಂದ ಎಲ್ಲ ಪ್ರಾಣಿಗಳ ಉತ್ಪತ್ತಿಯಾಗಿದೆಯೋ ಹಾಗೂ ಯಾರಿಂದ ಈ ಜಗತ್ತು ವ್ಯಾಪಿಸಿದೆಯೋ, ಆ ಪರಮೇಶ್ವರನನ್ನು ತಮ್ಮ ಸ್ವಾಭಾವಿಕ ಕರ್ಮಗಳಿಂದ ಪೂಜಿಸಿ ಮನುಷ್ಯನು ಪರಮ ಸಿದ್ಧಿಯನ್ನು ಪಡೆಯುತ್ತಾನೆ. (18.46)
- ಚೆನ್ನಾಗಿ ಆಚರಿಸಲಾದ ಬೇರೆಯವರ ಧರ್ಮಕ್ಕಿಂತ, ಗುಣರಹಿತವಾಗಿದ್ದರೂ ತನ್ನ ಧರ್ಮವು ಶ್ರೇಷ್ಠವಾಗಿದೆ. ಏಕೆಂದರೆ ಸ್ವಭಾವದಿಂದ ನಿಯಮಿಸಲ್ಪಟ್ಟ ಸ್ವಧರ್ಮರೂಪೀ ಕರ್ಮವನ್ನು ಮಾಡುವವನಿಗೆ ಪಾಪವು ತಟ್ಟುವುದಿಲ್ಲ. (18.47)
- ಆದ್ದರಿಂದ ಕುಂತೀಪುತ್ರನೇ! ದೋಷಯುಕ್ತವಾಗಿದ್ದರೂ ಕೂಡ ಸ್ವಾಭಾವಿಕ ಕರ್ಮವನ್ನು ಬಿಡಬಾರದು. ಏಕೆಂದರೆ ಹೊಗೆಯಿಂದ ಅಗ್ನಿಯು ಕೂಡಿರುವಂತೆಯೇ ಎಲ್ಲ ಕರ್ಮಗಳೂ ಒಂದಲ್ಲ ಒಂದು ದೋಷದಿಂದ ಕೂಡಿರುತ್ತದೆ. (18.48)
- ಸರ್ವತ್ರ ಆಸಕ್ತಿರಹಿತ ಬುದ್ಧಿಯುಳ್ಳವನು, ನಿಃಸ್ಪೃಹ ಮತ್ತು ಅಂತಃಕರಣವನ್ನು ಗೆದ್ದುಕೊಂಡಿರುವ ಮನುಷ್ಯನು ಸಾಂಖ್ಯಯೋಗದಿಂದ ಆ ಶ್ರೇಷ್ಠ ‘ನೈಷ್ಕರ್ಮ್ಯ ಸಿದ್ಧಿ’ಯನ್ನು ಪಡೆಯುತ್ತಾನೆ. (18.49)
- ಎಲೈ ಕುಂತೀಪುತ್ರನೇ! ಜ್ಞಾನಯೋಗದ ಅಂತಿಮ ಸ್ಥಿತಿಯಾದ ನೈಷ್ಕರ್ಮ್ಯ ಸಿದ್ಧಿಯನ್ನು ಹೇಗೆ ಪಡೆದುಕೊಂಡು ಮನುಷ್ಯನು ಬ್ರಹ್ಮನನ್ನು ಪಡೆದುಕೊಳ್ಳುವನೋ, ಆ ರೀತಿಯನ್ನು ಸಂಕ್ಷೇಪವಾಗಿ ನನ್ನಿಂದ ನೀನು ಕೇಳು. (18.50)
- ವಿಶುದ್ಧ ಬುದ್ಧಿಯಿಂದ ಕೂಡಿದ, ಹಗುರವಾದ, ಸಾತ್ತ್ವಿಕ ಮತ್ತು ನಿಯಮಿತ ಭೋಜನ ಮಾಡುವವನು, ಶಬ್ದಾದಿ ವಿಷಯಗಳನ್ನು ತ್ಯಜಿಸಿ ಏಕಾಂತದಲ್ಲಿ ಶುದ್ಧ ಜಾಗದಲ್ಲಿ ವಾಸಿಸುವವನು, ಸಾತ್ವಿಕ ಧಾರಣಶಕ್ತಿಯಿಂದ ಅಂತಃಕರಣ ಮತ್ತು ಇಂದ್ರಿಯಗಳನ್ನು ಸಂಯಮದಲ್ಲಿಟ್ಟುಕೊಂಡು, ಮನಸ್ಸು, ವಾಣಿ, ಶರೀರ ವಶದಲ್ಲಿಟ್ಟುಕೊಂಡು, ರಾಗ-ದ್ವೇಷಗಳನ್ನು ಸರ್ವಥಾ ನಾಶಗೊಳಿಸಿ, ಚೆನ್ನಾದ ದೃಢವಾದ ವೈರಾಗ್ಯವನ್ನು ಆಶ್ರಯಿಸಿದ, ಅಹಂಕಾರ, ಬಲ, ದರ್ಪ, ಕಾಮ, ಕ್ರೋಧ, ಸಂಗ್ರಹವೃತ್ತಿ ಇವುಗಳನ್ನು ತ್ಯಜಿಸಿ ನಿರಂತರ ಧ್ಯಾನಯೋಗ ಪರಾಯಣನಾದ, ಮಮತಾರಹಿತ, ಶಾಂತಿಯುಕ್ತ ಪುರುಷನು ಸಚ್ಚಿದಾನಂದಘನ ಬ್ರಹ್ಮನಲ್ಲಿ ಅಭಿನ್ನಭಾವದಿಂದ ಸ್ಥಿತನಾಗಿರಲು ಪಾತ್ರನಾಗುತ್ತಾನೆ. (18.51-53)
- ಮತ್ತೆ ಆ ಸಚ್ಚಿದಾನಂದಘನ ಬ್ರಹ್ಮನಲ್ಲಿ ತದ್ರೂಪನಾದ ಪ್ರಸನ್ನ ಚಿತ್ತವುಳ್ಳ ಯೋಗಿಯು ಯಾವುದಕ್ಕಾಗಿಯೂ ಶೋಕಿಸುವುದಿಲ್ಲ ಹಾಗೂ ಯಾವುದನ್ನೂ ಬಯಸುವುದಿಲ್ಲ. ಹೀಗೆ ಸಮಸ್ತ ಪ್ರಾಣಿಗಳಲ್ಲಿ ಸಮಭಾವವುಳ್ಳ ಯೋಗಿಯು ನನ್ನ ಪರಾಭಕ್ತಿಯನ್ನು ಪಡೆಯುತ್ತಾನೆ. (18.54)
- ಆ ಪರಾಭಕ್ತಿಯ ಮೂಲಕ ಅವನು ಪರಮಾತ್ಮನಾದ ನನ್ನನ್ನು ‘ನಾನು ಹೇಗಿರುವೆನೋ ಹಾಗೆಯೇ’ ಸರಿಯಾಗಿ ತತ್ತ್ವಶಃ ತಿಳಿಯುತ್ತಾನೆ. ಹಾಗೆಯೇ ಆ ಭಕ್ತಿಯಿಂದ ನನ್ನನ್ನು ತತ್ತ್ವದಿಂದ ತಿಳಿದ ಕೂಡಲೇ ನನ್ನಲ್ಲಿ ಪ್ರವಿಷ್ಟನಾಗುತ್ತಾನೆ. (18.55)
- ನನ್ನ ಆಶ್ರಯದಲ್ಲಿರುವ ಕರ್ಮಯೋಗಿಯು ಎಲ್ಲ ಕರ್ಮಗಳನ್ನು ಸದಾಕಾಲ ಮಾಡುತ್ತಿದ್ದರೂ ನನ್ನ ಕೃಪೆಯಿಂದ ಸನಾತನ ಅವಿನಾಶೀ ಪರಮಪದವನ್ನು ಹೊಂದುವನು. (18.56)
- ಎಲ್ಲ ಕರ್ಮಗಳನ್ನು ಮನಃಪೂರ್ವಕ ನನ್ನಲ್ಲಿ ಅರ್ಪಣೆಮಾಡಿ ಹಾಗೆಯೇ ಸಮತ್ವಬುದ್ಧಿರೂಪೀ ಯೋಗವನ್ನು ಅವಲಂಬಿಸಿ ನೀನು ನನ್ನ ಪರಾಯಣನಾಗಿ, ನಿರಂತರ ನನ್ನಲ್ಲಿ ಚಿತ್ತವುಳ್ಳವನಾಗು. (18.57)
- ಮೇಲೆ ಹೇಳಿದಂತೆ ನನ್ನಲ್ಲಿ ಚಿತ್ತವುಳ್ಳವನಾಗಿ ನೀನು ನನ್ನ ಕೃಪೆಯಿಂದ ಎಲ್ಲ ಸಂಕಟಗಳನ್ನು ಸುಲಭವಾಗಿ ದಾಟಿಬಿಡುವೆ. ಮತ್ತು ಅಹಂಕಾರದಿಂದ ನನ್ನ ಮಾತನ್ನು ಕೇಳದಿದ್ದರೆ ನಾಶವಾಗುವೆ. ಅರ್ಥಾತ್ ಪರಮಾರ್ಥದಿಂದ ವಂಚಿತನಾಗುವೆ. (18.58)
- ನೀನು ಅಹಂಕಾರಪಟ್ಟು ‘ನಾನು ಯುದ್ಧ ಮಾಡುವುದಿಲ್ಲ’ ಎಂದು ತಿಳಿದಿರುವೆ. ಆ ನಿನ್ನ ನಿಶ್ಚಯವು ವ್ಯರ್ಥವಾಗಿದೆ, ಏಕೆಂದರೆ ನಿನ್ನ ಸ್ವಭಾವವು ನಿನ್ನನ್ನು ಬಲವಂತವಾಗಿ ಯುದ್ಧಕ್ಕೆ ತೊಡಗಿಸೀತು. (18.59)
- ಎಲೈ ಕುಂತೀಪುತ್ರನೇ! ಯಾವ ಕರ್ಮವನ್ನು ನೀನು ಮೋಹದಿಂದಾಗಿ ಮಾಡಲು ಇಚ್ಛಿಸದಿದ್ದರೂ ಅದನ್ನೂ ಕೂಡ ನಿನ್ನ ಪೂರ್ವಕೃತ ಸ್ವಾಭಾವಿಕ ಕರ್ಮದಿಂದ ಬದ್ಧನಾದ್ದರಿಂದ ಪರಾಧೀನನಾಗಿ ಮಾಡುವೆ. (18.60)
- ಎಲೈ ಅರ್ಜುನ! ಅಂತರ್ಯಾಮೀ ಪರಮೇಶ್ವರನು ತನ್ನ ಮಾಯೆಯಿಂದ ಶರೀರರೂಪೀ ಯಂತ್ರದ ಮೇಲೆ ಆರೂಢನಾಗಿ ಸರ್ವ ಪ್ರಾಣಿಗಳನ್ನು ಅವರ ಕರ್ಮಾನುಸಾರ ಅಲೆಸುತ್ತಾ, ಎಲ್ಲ ಪ್ರಾಣಿಗಳ ಹೃದಯದಲ್ಲಿ ನೆಲೆಸಿರುವನು. (18.61)
- ಎಲೈ ಭಾರತಾ! ನೀನು ಎಲ್ಲ ಪ್ರಕಾರದಿಂದ ಆ ಪರಮೇಶ್ವರನಿಗೇ ಶರಣಾಗು. ಆ ಪರಮಾತ್ಮನ ಕೃಪೆಯಿಂದಲೇ ನೀನು ಪರಮ ಶಾಂತಿಯನ್ನು ಹಾಗೂ ಸನಾತನ ಪರಮಧಾಮವನ್ನು ಹೊಂದುವೆ. (18.62)
- ಹೀಗೆ ಈ ಗೋಪನೀಯಕ್ಕಿಂತಲೂ ಅತಿಗೋಪನೀಯ ಜ್ಞಾನವನ್ನು ನಾನು ನಿನಗೆ ಹೇಳಿದೆ. ಇನ್ನು ನೀನು ಈ ರಹಸ್ಯಮಯ ಜ್ಞಾನವನ್ನು ಪೂರ್ಣವಾಗಿ ಚೆನ್ನಾಗಿ ವಿಚಾರಮಾಡಿ ಮತ್ತೆ ನಿನಗೆ ಇಷ್ಟವಿರುವಂತೆ ಮಾಡು. (18.63)
- ಸರ್ವ ಗೋಪನೀಯಕ್ಕಿಂತಲೂ ಅತಿ ಗೋಪನೀಯವಾದ ನನ್ನ ಪರಮ ರಹಸ್ಯಯುಕ್ತವಾದ ಮಾತನ್ನು ನೀನು ಇನ್ನೊಮ್ಮೆ ಕೇಳು. ನೀನು ನನಗೆ ಅತ್ಯಂತ ಪ್ರಿಯನಾಗಿರುವೆ. ಆದ್ದರಿಂದ ಈ ಪರಮ ಹಿತಕಾರಕವಾದ ವಚನವನ್ನು ನಾನು ನಿನಗೆ ಹೇಳುವೆನು. (18.64)
- ಎಲೈ ಅರ್ಜುನ! ನೀನು ನನ್ನಲ್ಲಿ ಮನಸ್ಸುಳ್ಳವನಾಗು. ನನ್ನ ಭಕ್ತನಾಗು. ನನ್ನನ್ನು ಪೂಜಿಸು ಮತ್ತು ನನಗೆ ನಮಸ್ಕರಿಸು. ಹೀಗೆ ಮಾಡುವುದರಿಂದ ನೀನು ನನ್ನನ್ನೇ ಪಡೆಯುವೆ. ಇದನ್ನು ನಾನು ನಿನಗೆ ಸತ್ಯವಾಗಿ ಪ್ರತಿಜ್ಞಾಪೂರ್ವಕ ಹೇಳುವೆನು, ಏಕೆಂದರೆ ನೀನು ನನಗೆ ಅತ್ಯಂತ ಪ್ರಿಯನಾಗಿರುವೆ. (18.65)
- ಸರ್ವಧರ್ಮ ಅಂದರೆ ಸಮಸ್ತ ಕರ್ತವ್ಯ ಕರ್ಮಗಳನ್ನು ನನಗೆ ಅರ್ಪಿಸಿ ನೀನು ಕೇವಲ ಸರ್ವಶಕ್ತಿವಂತ, ಸರ್ವಾಧಾರ ಪರಮೇಶ್ವರನಾದ ನನಗೇ ಶರಣಾಗು. ನಾನು ನಿನ್ನನ್ನು ಎಲ್ಲ ಪಾಪಗಳಿಂದ ಬಿಡುಗಡೆಗೊಳಿಸುವೆನು. ನೀನು ಶೋಕಿಸಬೇಡ. (18.66)
- ಈ ಗೀತಾರೂಪೀ ರಹಸ್ಯಮಯ ಉಪದೇಶವನ್ನು ಎಂದಿಗೂ ತಪಸ್ಸು ಮಾಡದ ಮನುಷ್ಯನಿಗೆ ಹೇಳಬೇಡ.
ಹಾಗೆಯೇ ಭಕ್ತಿಹೀನ ಮನುಷ್ಯನಿಗೆ ಹಾಗೆಯೇ ಕೇಳುವ ಇಚ್ಛೆ ಇಲ್ಲದವನಿಗೂ ಹೇಳಬಾರದು ಹಾಗೂ ನನ್ನಲ್ಲಿ ದೋಷ ದೃಷ್ಟಿಯನ್ನಿರಿಸುವನಿಗಂತೂ ಎಂದಿಗೂ ಹೇಳಬಾರದು. (18.67) - ನನ್ನಲ್ಲಿ ಪರಮ ಪ್ರೇಮವನ್ನಿಟ್ಟು ಈ ಪರಮ ರಹಸ್ಯಯುಕ್ತ ಗೀತಾಶಾಸ್ತ್ರವನ್ನು ನನ್ನ ಭಕ್ತರಲ್ಲಿ ಹೇಳುವವನು ನನ್ನನ್ನೇ ಪಡೆಯುತ್ತಾನೆ – ಇದರಲ್ಲಿ ಯಾವ ಸಂದೇಹವೂ ಇಲ್ಲ. (18.68)
- ಅವನಿಗಿಂತ ಹೆಚ್ಚಾಗಿ ನನ್ನ ಪ್ರಿಯಕಾರ್ಯ ಮಾಡುವವನು ಮನುಷ್ಯರಲ್ಲಿ ಬೇರೆ ಯಾರೂ ಇಲ್ಲ ಹಾಗೂ ಭೂಮಂಡಲದಲ್ಲಿ ಅವನಿಗಿಂತ ಮಿಗಿಲಾಗಿ ನನಗೆ ಪ್ರಿಯನಾದವನು ಬೇರೆ ಯಾರೂ ಇಲ್ಲ ಹಾಗೂ ಭವಿಷ್ಯದಲ್ಲಿಯೂ ಆಗಲಾರನು. (18.69)
- ನಮ್ಮಿಬ್ಬರ ಈ ಧರ್ಮಮಯ ಸಂವಾದರೂಪೀ ಈ ಗೀತಾಶಾಸ್ತ್ರವನ್ನು ಅಧ್ಯಯನ ಮಾಡುವ ಮನುಷ್ಯನ ಮೂಲಕ ನಾನು ಜ್ಞಾನಯಜ್ಞದಿಂದ ಪೂಜಿತನಾಗುವೆನು ಎಂಬುದು ನನ್ನ ಮತವಾಗಿದೆ. (18.70)
- ಶ್ರದ್ಧಾಯುಕ್ತನಾಗಿ ದೋಷದೃಷ್ಟಿಯನ್ನಿಡದೆ ಈ ಗೀತಾಶಾಸ್ತ್ರದ ಶ್ರವಣ ಮಾಡುವವನೂ ಕೂಡ ಪಾಪಗಳಿಂದ ಮುಕ್ತನಾಗಿ ಪುಣ್ಯಕರ್ಮ ಮಾಡುವವರ ಶ್ರೇಷ್ಠ ಲೋಕಗಳನ್ನು ಹೊಂದುವನು. (18.71)
- ಎಲೈ ಪಾರ್ಥನೆ! ಈ ಗೀತಾಶಾಸ್ತ್ರವನ್ನು ನೀನು ಏಕಾಗ್ರಚಿತ್ತದಿಂದ ಕೇಳಿರುವೆಯಲ್ಲ? ಹಾಗೂ ಧನಂಜಯನೇ! ಅಜ್ಞಾನದಿಂದ ಉಂಟಾದ ನಿನ್ನ ಮೋಹವು ನಾಶವಾಗಿದೆಯಲ್ಲ? (18.72)
- ಅರ್ಜುನನು ಹೇಳಿದನು – ಹೇ ಅಚ್ಯುತಾ! ನಿನ್ನ ಕೃಪೆಯಿಂದ ನನ್ನ ಮೋಹವು ನಾಶವಾಯಿತು ಹಾಗೂ ನಾನು ಸ್ಮೃತಿಯನ್ನು ಪಡೆದುಕೊಂಡಿದ್ದೇವೆ. ಈಗ ನಾನು ಸಂಶಯರಹಿತನಾಗಿ ಸ್ಥಿತನಾಗಿದ್ದೇನೆ. ಆದ್ದರಿಂದ ನಿನ್ನ ಆಜ್ಞೆಯನ್ನು ಪಾಲಿಸುವೆನು. (18.73)
- ಸಂಜಯನು ಹೇಳಿದನು – ಎಲೈ ರಾಜನೇ! ಹೀಗೆ ನಾನು ಶ್ರೀವಾಸುದೇವ ಮತ್ತು ಮಹಾತ್ಮಾ ಅರ್ಜುನರ ಈ ಅದ್ಭುತ ರಹಸ್ಯಮಯ ರೋಮಾಂಚಕರ ಸಂವಾದವನ್ನು ಕೇಳಿದನು. (18.74)
- ಶ್ರೀವ್ಯಾಸರ ಕೃಪೆಯಿಂದ ದಿವ್ಯದೃಷ್ಟಿಯನ್ನು ಪಡೆದ ನಾನು ಈ ಪರಮ ಗೋಪನೀಯ ಯೋಗವನ್ನು ಸ್ವತಃ ಯೋಗೇಶ್ವರ ಭಗವಾನ್ ಶ್ರೀಕೃಷ್ಣನು ಅರ್ಜುನನಿಗೆ ಹೇಳುತ್ತಿರುವಂತೆ ಪ್ರತ್ಯಕ್ಷವಾಗಿ ಕೇಳಿದ್ದೇನೆ. (18.75)
- ಮಹಾರಾಜಾ! ಭಗವಾನ್ ಶ್ರೀಕೃಷ್ಣ ಮತ್ತು ಅರ್ಜುನರ ಈ ರಹಸ್ಯಮಯ, ಕಲ್ಯಾಣಕಾರಕ ಹಾಗೂ ಅದ್ಭುತ ಸಂವಾದವನ್ನು ಪುನಃ-ಪುನಃ ಸ್ಮರಿಸಿಕೊಂಡು ನಾನು ಪದೇ-ಪದೇ ಹರ್ಷಿತವಾಗುತ್ತಿದ್ದೇನೆ. (18.76)
- ಎಲೈ ರಾಜಾ! ಶ್ರೀಹರಿಯ ಆ ಅತ್ಯಂತ ಅಲೌಕಿಕ ರೂಪವನ್ನು ಬಾರಿಬಾರಿಗೂ ಸ್ಮರಿಸಿಕೊಂಡು ನನ್ನ ಚಿತ್ತದಲ್ಲಿ ತುಂಬಾ ಆಶ್ಚರ್ಯವಾಗುತ್ತದೆ ಮತ್ತು ನಾನು ಪದೇ-ಪದೇ ಹರ್ಷಿತನಾಗುತ್ತಿದ್ದೇನೆ. (18.77)
- ಎಲ್ಲಿ ಯೋಗೇಶ್ವರನಾದ ಭಗವಾನ್ ಶ್ರೀಕೃಷ್ಣನಿದ್ದಾನೋ ಹಾಗೂ ಗಾಂಡೀವ ಧನುರ್ಧಾರಿ ಅರ್ಜುನನಿರುವನೋ ಅಲ್ಲಿಯೇ ಶ್ರೀ, ವಿಜಯ, ವಿಭೂತಿ ಮತ್ತು ಅಚಲವಾದ ನೀತಿಯು ಇದೆ, ಎಂಬುದೇ ನನ್ನ ಮತವಾಗಿದೆ. (18.78)